ವಿಜಯಪುರ: ಮುಖ್ಯಮಂತ್ರಿ Siddaramaiah ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ Basanagouda Patil Yatnal ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯ ಸರ್ಕಾರದ ಮುಸ್ಲಿಂ ಓಲೈಕೆ ರಾಜಕಾರಣ ಮಿತಿಮೀರಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಸ್ವಪಕ್ಷದ ರಾಜ್ಯಾಧ್ಯಕ್ಷ B. Y. Vijayendra ಅವರ ನೈತಿಕತೆಯನ್ನೂ ಪ್ರಶ್ನಿಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯ ಸರ್ಕಾರವು ಲಾಡ್ಲೆ ಮಶಾಕ್ ದರ್ಗಾ ವಿವಾದಕ್ಕೆ ಸಂಬಂಧಿಸಿದ ಪ್ರಕರಣವನ್ನು ಹಿಂಪಡೆದಿರುವ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು. ಮಾಜಿ ಸಂಸದರು ಸೇರಿದಂತೆ ಹಲವರ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಗಳು, ಕೆ.ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಗಲಭೆ ಪ್ರಕರಣಗಳು ಮತ್ತು ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣಗಳನ್ನೂ ಸರ್ಕಾರ ಹಿಂಪಡೆದಿತ್ತು. ಈಗ ಲಾಡ್ಲೆ ಮಶಾಕ್ ಪ್ರಕರಣವನ್ನೂ ಹಿಂಪಡೆಯುವ ಮೂಲಕ ಅಪರಾಧ ಕೃತ್ಯಗಳಿಗೆ ಕಾಂಗ್ರೆಸ್ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಅವರು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾನೂನು ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಂತಹ ನಿರ್ಧಾರಗಳಿಂದ ಸಮಾಜದಲ್ಲಿ ತಪ್ಪು ಸಂದೇಶ ಹೋಗುತ್ತಿದೆ ಎಂದು ಯತ್ನಾಳ್ ಕಿಡಿಕಾರಿದರು.
ಇದೇ ವೇಳೆ ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧ ತೀವ್ರ ಹೋರಾಟ ನಡೆಸಬೇಕಾದ ಬಿಜೆಪಿ ದುರ್ಬಲ ನಾಯಕತ್ವದಿಂದ ಹಿನ್ನಡೆ ಅನುಭವಿಸುತ್ತಿದೆ ಎಂದು ಹೇಳಿದರು. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ನೇರ ಆರೋಪ ಮಾಡಿರುವ ಯತ್ನಾಳ್, “ಅನೇಕ ವಂಚನೆ ಹಾಗೂ ನಕಲಿ ಸಹಿ ಪ್ರಕರಣಗಳಲ್ಲಿ ಹೆಸರು ಕೇಳಿಬಂದಿರುವ ವಿಜಯೇಂದ್ರ ಅವರಿಗೆ ಸರ್ಕಾರದ ಭ್ರಷ್ಟ ಹಾಗೂ ತಪ್ಪು ನಿರ್ಧಾರಗಳ ವಿರುದ್ಧ ಮಾತನಾಡುವ ನೈತಿಕತೆ ಉಳಿದಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಕುರಿತಾಗಿ ಹೈಕಮಾಂಡ್ ನಡೆಸುತ್ತಿರುವ ಸಮೀಕ್ಷೆಯ ಮೇಲೂ ಯತ್ನಾಳ್ ಲೇವಡಿ ಮಾಡಿದರು. ಕೇವಲ 37 ಜನರನ್ನು ಕರೆದು ಅಭಿಪ್ರಾಯ ಕೇಳುವುದು ಸರಿಯಾದ ವಿಧಾನವಲ್ಲ. ಪಕ್ಷದ ಎಲ್ಲಾ ಹಾಲಿ ಮತ್ತು ಮಾಜಿ ಶಾಸಕರು, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ B. S. Yediyurappa ಹಾಗೂ ವಿಜಯೇಂದ್ರ ಕೆಲ ಸ್ವಾಮೀಜಿಗಳ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಯತ್ನಾಳ್, “ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಲಿಂಗಾಯತರು ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂಬ ಸಂದೇಶವನ್ನು ಅಮಿತ್ ಶಾ ಅವರಿಗೆ ರವಾನಿಸಲಾಗುತ್ತಿದೆ. ಇಂತಹ ಮಾತುಗಳನ್ನು ನಂಬಿ ಪ್ರಧಾನಿ Narendra Modi ಅವರು ಮೌನವಾಗಿರಬಾರದು” ಎಂದು ಹೇಳಿದರು.
ಪಕ್ಷದ ಪ್ರಸ್ತುತ ರಾಜ್ಯ ಪದಾಧಿಕಾರಿಗಳಲ್ಲಿಯೂ ಬಹುತೇಕರು ವಿಜಯೇಂದ್ರ ಪರವಾಗಿದ್ದಾರೆ ಎಂದು ಟೀಕಿಸಿದ ಯತ್ನಾಳ್, “ಪಿ. ರಾಜು ಹಾಗೂ ತಳಕೇರಿ ಸೇರಿದಂತೆ ಹಲವರು ವಿಜಯೇಂದ್ರನ ಆಪ್ತರಾಗಿದ್ದಾರೆ. ಅವರ ಬಳಿ ಅಭಿಪ್ರಾಯ ಕೇಳಿದರೆ ಅವರು ಸತ್ಯ ಹೇಳುವುದಿಲ್ಲ. ಸಹಜವಾಗಿಯೇ ವಿಜಯೇಂದ್ರ ಪರ ಮಾತನ್ನೇ ಆಡುತ್ತಾರೆ” ಎಂದು ಲೇವಡಿ ಮಾಡಿದರು.
ಸದ್ಯ ರಾಜ್ಯ ನಾಯಕತ್ವದ ಕುರಿತು ಸಮೀಕ್ಷೆ ನಡೆಸಲು ಬಂದಿರುವ ಕೇಂದ್ರದ ಇಬ್ಬರು ನಾಯಕರು ಪ್ರಾಮಾಣಿಕರಾಗಿದ್ದಾರೆ. ಅವರು ವಾಸ್ತವಿಕ ವರದಿ ನೀಡಿದರೆ ಪಕ್ಷಕ್ಕೆ ಒಳಿತಾಗುತ್ತದೆ. ಇಲ್ಲದಿದ್ದರೆ ಪಕ್ಷದ ಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬಹುದು ಎಂದು ಯತ್ನಾಳ್ ಆತಂಕ ವ್ಯಕ್ತಪಡಿಸಿದರು.

