ಶಿವಮೊಗ್ಗದ ಖ್ಯಾತ ಮಾನಸಿಕ ಸಾಮಾಜಿಕ ಪುನರ್ವಸತಿ ಕೇಂದ್ರವೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 17 ವರ್ಷದ ಯುವತಿಯೊಬ್ಬಳು ಕೇವಲ ಒಂದೇ ದಿನದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದ ನಿವಾಸಿ ನೇಹಾ ಮೃತಪಟ್ಟ ದುರ್ದೈವಿ. ಗುಣಮುಖಳಾಗಿ ಮನೆಗೆ ಮರಳುತ್ತಾಳೆ ಎಂಬ ಪೋಷಕರ ನಿರೀಕ್ಷೆ ಸುಳ್ಳಾಗಿದ್ದು, ಇಡೀ ಕುಟುಂಬವೀಗ ಶೋಕಸಾಗರದಲ್ಲಿ ಮುಳುಗಿದೆ. ಈ ಸಾವಿನ ಹಿಂದೆ ಹತ್ತಾರು ಅನುಮಾನಗಳು ವ್ಯಕ್ತವಾಗಿದ್ದು, ಈ ಸಂಬಂಧ ಶಿವಮೊಗ್ಗದ ತುಂಗಾ ನಗರ ಪೊಲೀಸ್ ಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು ಎಂಟು ತಿಂಗಳ ಹಿಂದೆ ಕಾಲೇಜಿಗೆ ತೆರಳುವ ವೇಳೆ ಹಾವನ್ನು ನೋಡಿ ನೇಹಾ ತೀವ್ರವಾಗಿ ಭಯಭೀತರಾಗಿದ್ದರು ಎನ್ನಲಾಗಿದೆ. ಈ ಘಟನೆಯ ನಂತರ ಆಕೆ ಮಾನಸಿಕವಾಗಿ ಕುಗ್ಗಿದ್ದು, ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಂಡಿದ್ದರು. ಇದೇ ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನೂ ಬರೆದಿರಲಿಲ್ಲ. ಈ ನಡುವೆ ಒಮ್ಮೆ ಬ್ಲೇಡ್ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಮೂರು ದಿನಗಳ ಹಿಂದಷ್ಟೇ ಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಮಾನಸಧಾರ ಪುನರ್ವಸತಿ ಕೇಂದ್ರದವರು ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದರೆ ಯುವತಿ ಗುಣಮುಖಳಾಗುತ್ತಾಳೆ ಎಂದು ಭರವಸೆ ನೀಡಿದ್ದರಿಂದ ಪೋಷಕರು ಮೊನ್ನೆ ಮಧ್ಯಾಹ್ನ ಆಕೆಯನ್ನು ಅಲ್ಲಿಗೆ ದಾಖಲಿಸಿದ್ದರು.
ಆದರೆ ದಾಖಲಾದ ಮರುದಿನವೇ ನೇಹಾ ಮತ್ತೆ ಕೈ ಕೊಯ್ದುಕೊಂಡಿದ್ದಾಳೆ, ಕೂಡಲೇ ಸಾವರ್ ಲೈನ್ ರಸ್ತೆಯ ಖಾಸಗಿ ಆಸ್ಪತ್ರೆಗೆ ಬನ್ನಿ ಎಂದು ಕೇಂದ್ರದ ಸಿಬ್ಬಂದಿ ಪೋಷಕರಿಗೆ ಕರೆ ಮಾಡಿದ್ದಾರೆ. ಗಾಬರಿಯಿಂದ ಆಸ್ಪತ್ರೆಗೆ ಧಾವಿಸಿದ ಪೋಷಕರಿಗೆ ನೇಹಾ ಮೃತಪಟ್ಟಿರುವುದು ತಿಳಿದುಬಂದಿದೆ. ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿಯೇ ಈ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ. ಸಂಪೂರ್ಣ ಜವಾಬ್ದಾರಿ ನಮ್ಮದು ಎಂದು ನಂಬಿಸಿ ಆಕೆಯನ್ನು ಮಾನಸಿಕ ರೋಗಿಗಳ ಜೊತೆ ಬಿಡಲಾಗಿತ್ತು ಎಂಬುದು ಪೋಷಕರ ದೂರು. ಘಟನೆ ನಡೆದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡದೆ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ.
ಕೇಂದ್ರದ ಕೊಠಡಿಯಲ್ಲಿಯೇ ನೇಹಾ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪುನರ್ವಸತಿ ಕೇಂದ್ರದ ನಿರ್ಲಕ್ಷ್ಯದ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸುರಕ್ಷಿತವಾಗಿರಬೇಕಾದ ಕೇಂದ್ರದಲ್ಲಿ ಒಂದೇ ದಿನದಲ್ಲಿ ಇಂತಹ ದುರಂತ ಸಂಭವಿಸಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಸ್ತುತ ಪೊಲೀಸರು ತನಿಖೆ ಕೈಗೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಬೇಕಿದೆ.