ಓಬಿಸಿ ನಾಯಕರನ್ನು ಕಾಂಗ್ರೆಸ್ ಸಹಿಸುವುದಿಲ್ಲ, ಗಾಂಧಿ ಕುಟುಂಬದ ಡಿಎನ್‌ಎಯಲ್ಲೇ ಓಬಿಸಿ ನಾಯಕರ ವಿರುದ್ಧ ದ್ವೇಷ ಇದೆ: ಶಾಸಕ ಸುನಿಲ್ ಕುಮಾರ್ ವಾಗ್ದಾಳಿ

suddilive.com
By -
0

 

V Sunil Kumar speaking at a political event in Udupi criticizing Congress leaders Siddaramaiah and Rahul Gandhi over OBC politics.

ಉಡುಪಿ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ರಾಜಕೀಯ ಬೆಳವಣಿಗೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ವಿ. ಸುನಿಲ್ ಕುಮಾರ್, ಇದು ಕಾಂಗ್ರೆಸ್ ಹೈಕಮಾಂಡ್‌ನ ಓಬಿಸಿ ಸಮುದಾಯದ ಮೇಲಿನ ದ್ವೇಷವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಆರೋಪಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರನ್ನು ಹಿಂದೆ ಅಧಿಕಾರದಿಂದ ಕೆಳಗಿಳಿಸಿದ ರೀತಿಯಲ್ಲೇ ಇದೀಗ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಿಗೊಳಿಸಲು ಕಾಂಗ್ರೆಸ್ ಮುಂದಾಗಿದೆ ಎಂದು ಅವರು ಕಿಡಿಕಾರಿದ್ದಾರೆ.


ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ದೇವರಾಜ್ ಅರಸು ಅವರು ಹಿಂದುಳಿದ ವರ್ಗಗಳ ಪರ ಕ್ರಾಂತಿಕಾರಿ ಆಡಳಿತ ನೀಡಿದ ನಾಯಕನಾಗಿದ್ದರು. “ಊಳುವವನೇ ಹೊಲದೊಡೆಯ” ಕಾಯ್ದೆ ಜಾರಿಗೊಳಿಸುವ ಮೂಲಕ ಸಾಮಾಜಿಕ ನ್ಯಾಯದ ರಾಜಕೀಯಕ್ಕೆ ಹೊಸ ದಿಕ್ಕು ನೀಡಿದ್ದರು. ಜನಪರ ಆಡಳಿತದ ಮೂಲಕ ರಾಜ್ಯದ ಜನಮನ ಗೆದ್ದಿದ್ದ ಅರಸು ಅವರ ಬೆಳೆಯುತ್ತಿರುವ ಜನಪ್ರಿಯತೆಯನ್ನು ಸಹಿಸದೇ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು ಎಂದು ಸುನಿಲ್ ಕುಮಾರ್ ಆರೋಪಿಸಿದರು.


ಅದೇ ರೀತಿಯಲ್ಲಿ ಈಗ ಕರ್ನಾಟಕದಲ್ಲಿ ಪ್ರಭಾವಿ ಓಬಿಸಿ ನಾಯಕನಾಗಿ ಹೊರಹೊಮ್ಮಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ ಎಂದು ಅವರು ಹೇಳಿದರು. ದೇವರಾಜ್ ಅರಸು ನಂತರ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬೀರಿದ ಓಬಿಸಿ ನಾಯಕ ಸಿದ್ದರಾಮಯ್ಯ ಮಾತ್ರವಾಗಿದ್ದು, ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಕಾರಣದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟೀಕಿಸಿದರು.


ಗಾಂಧಿ ಕುಟುಂಬದ ರಾಜಕೀಯ ಧೋರಣಿಯಲ್ಲೇ ಓಬಿಸಿ ನಾಯಕರ ವಿರುದ್ಧ ಅಸಹನೆ, ಈರ್ಷೆ ಮತ್ತು ದ್ವೇಷ ಅಡಕವಾಗಿದೆ ಎಂದು ವಾಗ್ದಾಳಿ ನಡೆಸಿದ ಸುನಿಲ್ ಕುಮಾರ್, “ನೂಲಿನಂತೆ ಸೀರೆ ಎಂಬಂತೆ ಗಾಂಧಿ ಕುಟುಂಬದ ಡಿಎನ್‌ಎಯಲ್ಲೇ ಓಬಿಸಿ ನಾಯಕರನ್ನು ಕಡೆಗಣಿಸುವ ಮನೋಭಾವ ಇದೆ” ಎಂದು ಆರೋಪಿಸಿದರು.


ಒಂದೆಡೆ ರಾಹುಲ್ ಗಾಂಧಿ ದೇಶದಾದ್ಯಂತ ಜಾತಿ ಗಣತಿ ನಡೆಸಬೇಕು, ಓಬಿಸಿ ಸಮುದಾಯಕ್ಕೆ ನ್ಯಾಯ ಕೊಡಬೇಕು ಎಂದು ಭಾಷಣ ಮಾಡುತ್ತಾರೆ. ಆದರೆ ಮತ್ತೊಂದೆಡೆ ಓಬಿಸಿ ಸಮುದಾಯದ ನಾಯಕರನ್ನು ಅಧಿಕಾರದಿಂದ ಕೆಳಗಿಳಿಸುವ ರಾಜಕೀಯ ನಡೆಯುತ್ತಿದೆ ಎಂದು ಅವರು ಟೀಕಿಸಿದರು. “ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಇದ್ದ ಒಬ್ಬನೇ ಒಬ್ಬ ಓಬಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾಕೆ ಪದಚ್ಯುತಿಗೊಳಿಸಲಾಯಿತು?” ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು.


ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ವಿಚಾರವು ಕೇವಲ ರಾಜಕೀಯ ಬದಲಾವಣೆ ಮಾತ್ರವಲ್ಲ, ಹಿಂದುಳಿದ ವರ್ಗಗಳ ರಾಜಕೀಯ ಪ್ರತಿನಿಧಿತ್ವದ ಮೇಲಿನ ಹೊಡೆತವಾಗಿದೆ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷದ ಒಳರಾಜಕೀಯ ಹಾಗೂ ಹೈಕಮಾಂಡ್ ಸಂಸ್ಕೃತಿ ರಾಜ್ಯದ ಜನಾದೇಶವನ್ನು ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದರು.

Post a Comment

0 Comments

Post a Comment (0)
3/related/default