ಉಡುಪಿ: ಕಾರು ಢಿಕ್ಕಿ: ರಸ್ತೆ ದಾಟುತ್ತಿದ್ದ ಬಾಲಕ ಮೃತ್ಯು

KARNATAKA NEWS LIVE
By -
0

 

nejaru-road-accident-abdul-rehman-death-udupi

ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ 12 ವರ್ಷದ ಬಾಲಕನೋರ್ವ ಮೃತಪಟ್ಟ ದುರ್ಘಟನೆ ಮೇ 15ರಂದು ಮಧ್ಯಾಹ್ನ ಉಡುಪಿ ಜಿಲ್ಲೆಯ ನೇಜಾರಿನ ಜ್ಯೋತಿ ನಗರದಲ್ಲಿ ನಡೆದಿದೆ. 


ಮೃತ ಬಾಲಕನನ್ನು ನೇಜಾರು ಆದರ್ಶ ನಗರದ ನಿವಾಸಿಗಳಾದ ಇನಾಯತುಲ್ಲಾ ಎಫ್.ಎಂ. ಹಾಗೂ ಮುಸರ‌್ರಥ್ ಎಫ್.ಎಂ. ದಂಪತಿಯ ಪುತ್ರ, ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಬ್ದುಲ್ ರೆಹಮಾನ್ (12) ಎಂದು ಗುರುತಿಸಲಾಗಿದೆ. ಚುರುಕು ಹಾಗೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ರೆಹಮಾನ್‌ನ ಅಕಾಲಿಕ ನಿಧನ ಕುಟುಂಬಸ್ಥರು ಹಾಗೂ ಶಾಲಾ ವಲಯವನ್ನು ಕಂಬನಿ ಮಿಡಿಯುವಂತೆ ಮಾಡಿದೆ.


ಮೃತ ಬಾಲಕನ ತಾಯಿ ಮುಸರ‌್ರಥ್ ಅವರು ಹೂಡೆ ಸಾಲಿಹಾತ್ ಪಿಯು ಕಾಲೇಜಿನ ಪ್ರಾಧ್ಯಾಪಕಿಯಾಗಿದ್ದು, ಶುಕ್ರವಾರ ಮಧ್ಯಾಹ್ನ ತಮ್ಮ ಇಬ್ಬರು ಮಕ್ಕಳೊಂದಿಗೆ ಶಾಲೆಯಿಂದ ಪುಸ್ತಕಗಳನ್ನು ತೆಗೆದುಕೊಂಡು ಮನೆಗೆ ಮರಳುತ್ತಿದ್ದರು. ಈ ವೇಳೆ ಜುಮಾ ನಮಾಝ್‌ಗೆ ತೆರಳಲು ರೆಹಮಾನ್ ನೇಜಾರು ಆಯಿಷಾ ಮಸೀದಿ ಸಮೀಪ ವಾಹನದಿಂದ ಇಳಿದಿದ್ದನೆಂದು ತಿಳಿದುಬಂದಿದೆ.


ಮಸೀದಿ ಸಮೀಪ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಸಂತೆಕಟ್ಟೆಯಿಂದ ಕೆಮ್ಮಣ್ಣು ಕಡೆಗೆ ತೆರಳುತ್ತಿದ್ದ ಕಾರೊಂದು ಅತೀವೇಗ ಹಾಗೂ ಅಜಾಗರೂಕತೆಯಿಂದ ಬಂದು ಬಾಲಕನಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬಾಲಕ ರಸ್ತೆ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನು.


ತಕ್ಷಣವೇ ಸ್ಥಳೀಯರು ಹಾಗೂ ಕುಟುಂಬಸ್ಥರು ಗಾಯಾಳುವನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸಲು ಮುಂದಾದರೂ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಅಬ್ದುಲ್ ರೆಹಮಾನ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಬಾಲಕನ ಅಕಾಲಿಕ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮಡುಗಟ್ಟಿದೆ.


ಮೃತ ರೆಹಮಾನ್ ತಂದೆ-ತಾಯಿ, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಸಾಲಿಹಾತ್ ಶಿಕ್ಷಣ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅಬ್ದುಲ್ ರೆಹಮಾನ್ ಅಗಲಿಕೆಗೆ ಸಾಲಿಹಾತ್ ಆಡಳಿತ ಮಂಡಳಿ, ಆಡಳಿತಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಬಾಲಕನ ಸೌಮ್ಯ ಸ್ವಭಾವ, ವಿದ್ಯಾಭ್ಯಾಸದ ಮೇಲಿನ ಆಸಕ್ತಿ ಹಾಗೂ ಶಿಸ್ತುಬದ್ಧ ನಡೆ ಎಲ್ಲರ ಮನಸ್ಸಿನಲ್ಲಿ ಸದಾ ಉಳಿಯಲಿದೆ ಎಂದು ಶಿಕ್ಷಕರು ಹಾಗೂ ಸಹಪಾಠಿಗಳು ಕಂಬನಿ ಮಿಡಿದಿದ್ದಾರೆ.

Tags:

Post a Comment

0 Comments

Post a Comment (0)
3/related/default