ಮೂಡಬಿದ್ರೆ, ಮೇ 15: ಐಷಾರಾಮಿ ಕಾರಿನಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡಬಿದ್ರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿರುವ ಘಟನೆ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಸಮೀಪ ನಡೆದಿದೆ. ಆರೋಪಿಗಳು ಪೊಲೀಸರ ಕಣ್ಣಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಚುರುಕಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಅವರನ್ನು ಸುತ್ತುವರೆದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮೂಡಬಿದ್ರೆ ಹಂಡೇಲು ನಿವಾಸಿ ಮಹಮ್ಮದ್ ಆರಿಫ್ ಹಾಗೂ ಗಂಟಾಲಕಟ್ಟೆಯ ಇಮ್ರಾನ್ ಅಲಿಯಾಸ್ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಇವರಿಂದ ಜಾನುವಾರು ಸಾಗಾಟಕ್ಕೆ ಬಳಸಲಾಗುತ್ತಿದ್ದ ಮಾರುತಿ ಬ್ರೀಜಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂಡಬಿದ್ರೆ ಪೊಲೀಸರು ರಾತ್ರಿ ವೇಳೆ ರೌಂಡ್ಸ್ ನಡೆಸುತ್ತಿದ್ದು, ಈ ಸಂದರ್ಭ ಅಕ್ರಮ ಜಾನುವಾರು ಸಾಗಾಟದ ಕುರಿತು ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪೊಲೀಸರು ಪಡುಮಾರ್ನಾಡು ಭಾಗದಲ್ಲಿ ವಾಹನ ತಪಾಸಣೆ ಕಾರ್ಯಾಚರಣೆ ನಡೆಸುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಬ್ರೀಜಾ ಕಾರನ್ನು ತಡೆದು ಪರಿಶೀಲನೆ ನಡೆಸಲು ಪೊಲೀಸರು ಸೂಚನೆ ನೀಡಿದರು. ಆದರೆ ಆರೋಪಿಗಳು ಕಾರು ನಿಲ್ಲಿಸದೆ ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಕಾರನ್ನು ಬೆನ್ನಟ್ಟಿದ್ದಾರೆ. ಕೆಲಕಾಲ ನಡೆದ ಹೈಡ್ರಾಮಾ ನಂತರ ತಪ್ಪಿಸಿಕೊಳ್ಳಲು ಯಾವುದೇ ದಾರಿ ಕಾಣದೆ ಆರೋಪಿಗಳು ಕಾರನ್ನು ಸಮೀಪದ ಮನೆಯೊಂದರ ಕಂಪೌಂಡ್ ಒಳಗೆ ನುಗ್ಗಿಸಿದ್ದಾರೆ. ಬಳಿಕ ಕಾರಿನಿಂದ ಇಳಿದು ಓಡಿಹೋಗಲು ಯತ್ನಿಸಿದರೂ, ಪೊಲೀಸರು ಸುತ್ತುವರೆದು ಇಬ್ಬರನ್ನೂ ಹಿಡಿಯುವಲ್ಲಿ ಯಶಸ್ವಿಯಾದರು.
ಬಂಧಿತರಿಂದ ವಶಪಡಿಸಿಕೊಂಡ ಕಾರನ್ನು ಪರಿಶೀಲಿಸಿದಾಗ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ಕಾರಿನ ಹಿಂಭಾಗದಲ್ಲಿ ಜಾನುವಾರುಗಳ ಕಾಲು ಹಾಗೂ ತಲೆಯನ್ನು ಕಟ್ಟಿ ಅಮಾನವೀಯವಾಗಿ ಕೂಡಿ ಹಾಕಿ ಸಾಗಿಸಲಾಗುತ್ತಿತ್ತು. ಜಾನುವಾರುಗಳಿಗೆ ಉಸಿರಾಟಕ್ಕೂ ತೊಂದರೆಯಾಗುವ ರೀತಿಯಲ್ಲಿ ಸಾಗಾಟ ಮಾಡಲಾಗಿದ್ದು, ಪ್ರಾಣಿ ಹಿಂಸೆ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸ ಮಾರಾಟಕ್ಕಾಗಿ ಅಥವಾ ಅಕ್ರಮ ಸಾಗಾಟ ಉದ್ದೇಶದಿಂದ ಕೊಂಡೊಯ್ಯುತ್ತಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಗೋಹತ್ಯೆ ತಡೆ ಕಾಯ್ದೆ, ದನ ಕಳ್ಳತನ ಹಾಗೂ ಪ್ರಾಣಿ ಹಿಂಸೆ ಸಂಬಂಧಿತ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಇನ್ನೂ ಬಂಧಿತ ಆರೋಪಿಗಳ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳ ಹಿಂದಿನ ಅಪರಾಧ ಚಟುವಟಿಕೆಗಳ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಕರಣದ ಕುರಿತು ಮೂಡಬಿದ್ರೆ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
