ಮಣಿಪಾಲ: ನಿಯಮ ಮೀರಿ ಹೋಟೆಲ್ ವ್ಯಾಪಾರ; ಮಾಲೀಕನ ವಿರುದ್ಧ ಎಫ್.ಐ.ಆರ್

KARNATAKA NEWS LIVE
By -
0

Manipal police station

ಮಣಿಪಾಲ: ನಿಗದಿತ ಸಮಯ ಕಳೆದರೂ ಹೋಟೆಲ್ ತೆರೆದು ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಹೋಟೆಲ್ ಮಾಲೀಕನ ಮೇಲೆ ಕಾನೂನು ಕ್ರಮ ಜರುಗಿಸಿದ್ದಾರೆ.

ಮೇ 5 ರಂದು ರಾತ್ರಿ ಮಣಿಪಾಲ ಪೊಲೀಸ್‌ ಉಪನಿರೀಕ್ಷಕರಾದ ತಿಮ್ಮೇಶ್ ಬಿ.ಎನ್. ಅವರು ನಗರದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮೇ 6 ರಂದು ಮುಂಜಾನೆ ಸುಮಾರು 0:27 ಗಂಟೆಯ ಸುಮಾರಿಗೆ ಶಿವಳ್ಳಿ ಗ್ರಾಮದ ವಿ.ಎಸ್. ಆಚಾರ್ಯ ರಸ್ತೆಯಲ್ಲಿರುವ ಹೋಟೆಲ್‌ವೊಂದು ಪರವಾನಗಿ ಅವಧಿ ಮುಗಿದಿದ್ದರೂ ಗ್ರಾಹಕರಿಗೆ ಪಾರ್ಸೆಲ್ ಸೇವೆ ನೀಡುತ್ತಿರುವುದು ಕಂಡುಬಂದಿದೆ.

ಅಲ್ಲದೆ, ತಡರಾತ್ರಿಯವರೆಗೂ ಹೋಟೆಲ್ ತೆರೆದಿದ್ದ ಕಾರಣ ಉಡುಪಿಯ ವಿವಿಧ ಭಾಗಗಳಿಂದ ಸಾರ್ವಜನಿಕರು ಮತ್ತು ಯುವಕರು ಅಲ್ಲಿ ಜಮಾಯಿಸುತ್ತಿದ್ದರು. ಇದರಿಂದಾಗಿ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದ್ದು, ಈ ಬಗ್ಗೆ ಸ್ಥಳೀಯರಿಂದ ದೂರುಗಳು ಕೇಳಿ ಬಂದಿದ್ದವು.

ಕೂಡಲೇ ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ ಉಪನಿರೀಕ್ಷಕರು ಹೋಟೆಲನ್ನು ಮುಚ್ಚಿಸಿದ್ದಾರೆ. ಈ ಹಿಂದೆಯೂ ಕೂಡ ಹೋಟೆಲ್ ಮಾಲೀಕರಿಗೆ ನಿಗದಿತ ಸಮಯಕ್ಕೆ ವ್ಯಾಪಾರ ಸ್ಥಗಿತಗೊಳಿಸುವಂತೆ ಹಲವು ಬಾರಿ ಮೌಖಿಕವಾಗಿ ಸೂಚನೆ ನೀಡಲಾಗಿತ್ತು. ಆದರೂ ಯಾವುದೇ ಪರವಾನಗಿ ಪಡೆಯದೆ ಮತ್ತು ಅಧಿಕಾರಿಗಳ ಸೂಚನೆಯನ್ನು ಉಲ್ಲಂಘಿಸಿ ಹೋಟೆಲ್ ನಡೆಸುವ ಮೂಲಕ ಸಾರ್ವಜನಿಕ ಉಪದ್ರವಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಪೊಲೀಸರು ಕಠಿಣ ನಿಲುವು ತಳೆದಿದ್ದಾರೆ.

ಸದ್ಯ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟು ಮಾಡಿದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2026, ಕಲಂ: 292 BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments

Post a Comment (0)
3/related/default