ಬೆಂಗಳೂರು: ಮಹಿಳೆಯರೊಂದಿಗಿನ ಆಕ್ಷೇಪಾರ್ಹ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರರಾವ್ ಅವರಿಗೆ ರಾಜ್ಯ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಅವರ ಮೇಲಿನ ಅಮಾನತು ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಿರುವ ಸರ್ಕಾರ, ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಮಹತ್ವದ ಹುದ್ದೆಗೆ ಮರುನೇಮಕ ಮಾಡಿ ಆದೇಶ ಹೊರಡಿಸಿದೆ.
ಹೊಸ ಹುದ್ದೆ ಸೃಷ್ಟಿ ಮತ್ತು ನೇಮಕ
ರಾಮಚಂದ್ರರಾವ್ ಅವರಿಗಾಗಿಯೇ 'ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯೆಲ್)' ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಈ ಸ್ಥಾನಕ್ಕೆ ಅವರನ್ನು ನಿಯೋಜಿಸಲಾಗಿದೆ. ಆಲ್ ಇಂಡಿಯಾ ಸರ್ವಿಸ್ (AIS) ನಿಯಮಗಳ ಅಡಿಯಲ್ಲಿ ಅವರ ಅಮಾನತನ್ನು ಹಿಂಪಡೆಯಲಾಗಿದ್ದು, ಈ ತಿಂಗಳಾಂತ್ಯಕ್ಕೆ ಅವರು ಸೇವೆಯಿಂದ ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
ಪ್ರಕರಣದ ಹಿನ್ನೆಲೆ ಮತ್ತು ವಿವಾದ
ಕಳೆದ ಜನವರಿ ತಿಂಗಳಲ್ಲಿ ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲೇ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದವು. ಈ ಹಗರಣ ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಜನವರಿ 19ರಂದು ಸರ್ಕಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು. ಅಂದು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ರಾಮಚಂದ್ರರಾವ್ ಅವರು ತಳ್ಳಿಹಾಕಿದ್ದರು.
ವರದಿ ಬಂದಿದ್ದರೂ ಸಡಿಲಿಕೆ ಏಕೆ?
ವಿಡಿಯೋಗಳ ಸತ್ಯಾಸತ್ಯತೆ ಪರಿಶೀಲಿಸಲು ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. ಮೂಲಗಳ ಪ್ರಕಾರ, ಸಮಿತಿಯು ಸದರಿ ವಿಡಿಯೋಗಳು ಅಸಲಿ ಎಂದು ವರದಿ ನೀಡಿದ್ದರೂ ಸಹ, ಸರ್ಕಾರವು ಅವರ ವಿರುದ್ಧ ಯಾವುದೇ ಕಠಿಣ ಶಿಸ್ತು ಕ್ರಮ ಅಥವಾ ವಿಚಾರಣೆಗೆ ಮುಂದಾಗದೆ ಅಮಾನತು ರದ್ದುಪಡಿಸಿರುವುದು ಈಗ ಹೊಸ ಚರ್ಚೆಗೆ ಗ್ರಾಸವಾಗಿದೆ. ಸಮಿತಿಯ ವರದಿಯನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಬದಲು, ನಿವೃತ್ತಿಯ ಹೊಸ್ತಿಲಲ್ಲಿರುವ ಅಧಿಕಾರಿಗೆ ಸರ್ಕಾರ ಮಣೆ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.
ಡಾ. ಕೆ. ರಾಮಚಂದ್ರರಾವ್, IPS ಅಧಿಕಾರಿ ಅಮಾನತು ರದ್ದು, ಕರ್ನಾಟಕ ಸರ್ಕಾರ, ವೈರಲ್ ವಿಡಿಯೋ ಪ್ರಕರಣ, ಪೊಲೀಸ್ ಮ್ಯಾನುಯೆಲ್ DGP, Karnataka IPS News
