ಬೆಳ್ತಂಗಡಿ: ಪತಿಯ ಮದ್ಯಪಾನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ | ವರದಕ್ಷಿಣೆ ಪ್ರಕರಣದಲ್ಲಿ ಪತಿ ಬಂಧನ

KARNATAKA NEWS LIVE
By -
0

 

belthangady-wife-suicide-dowry-harassment-case

ಬೆಳ್ತಂಗಡಿ: ಪತಿಯ ನಿರಂತರ ಕಿರುಕುಳ ಮತ್ತು ಮದ್ಯಪಾನದ ಚಟದಿಂದ ಮನನೊಂದು ಯುವತಿಯೊಬ್ಬರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾರೆಂಕಿ ಗ್ರಾಮದ ಬಂಗೇರುಕಟ್ಟೆ ದೋಟ ಎಂಬಲ್ಲಿ ಮೇ 15ರಂದು ನಡೆದಿದೆ. ಮೃತ ಮಹಿಳೆಯನ್ನು ಸಂಧ್ಯಾ (27) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಪತಿ ಧನಂಜಯ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ಮೃತ ಸಂಧ್ಯಾ ಅವರ ಸಹೋದರ ಸಂದೀಪ್ ಅವರು ಮೇ 16ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದಲ್ಲಿ ವರದಕ್ಷಿಣೆ ನಿಷೇಧ ಕಾಯಿದೆ ಹಾಗೂ ಬಿಎನ್‌ಎಸ್ ಕಲಂ 80 ಮತ್ತು 85ರಡಿ ಪ್ರಕರಣ ದಾಖಲಿಸಲಾಗಿದೆ. ಮೇ 17ರಂದು ಆರೋಪಿ ಧನಂಜಯ್ ಅವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.


ಪೊಲೀಸರ ಮಾಹಿತಿಯ ಪ್ರಕಾರ, ಸುಮಾರು ಮೂರು ವರ್ಷಗಳ ಹಿಂದೆ ಸಂಧ್ಯಾ ಅವರನ್ನು ಪಾರೆಂಕಿ ಗ್ರಾಮದ ದೋಟ ನಿವಾಸಿ ಧನಂಜಯ್ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ವರ್ಷ ಏಳು ತಿಂಗಳ ಹೆಣ್ಣು ಮಗು ಇದೆ. ಆದರೆ ಮದುವೆಯಾದ ಬಳಿಕ ಧನಂಜಯ್ ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಲ್ಲದೆ ಚಿನ್ನಾಭರಣ ಹಾಗೂ ಹಣ ತರುವಂತೆ ಆಗಾಗ ಒತ್ತಡ ಹೇರುತ್ತಿದ್ದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಈ ಕುರಿತು ಸಂಧ್ಯಾ ಅವರು ಹಲವು ಬಾರಿ ತಮ್ಮ ತಾಯಿಗೆ ಕರೆ ಮಾಡಿ ಪತಿಯ ವರ್ತನೆ ಬಗ್ಗೆ ಅಳಲು ತೋಡಿಕೊಂಡಿದ್ದರು. “ಪ್ರತಿದಿನ ಮದ್ಯಪಾನ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಚಿನ್ನ ಮತ್ತು ಹಣ ತರಬೇಕೆಂದು ಒತ್ತಾಯಿಸುತ್ತಿದ್ದಾರೆ” ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ವೇಳೆ ಕುಟುಂಬದವರು “ಕಾಲಕ್ರಮೇಣ ಎಲ್ಲವೂ ಸರಿಯಾಗಬಹುದು” ಎಂದು ಸಮಾಧಾನಪಡಿಸುತ್ತಿದ್ದರು ಎನ್ನಲಾಗಿದೆ.


ಮೇ 15ರಂದು ರಾತ್ರಿ ಸುಮಾರು 9 ಗಂಟೆ ವೇಳೆಗೆ ಸಂಧ್ಯಾ ತಮ್ಮ ತಾಯಿಗೆ ಕರೆ ಮಾಡಿ “ಇನ್ನು ಮುಂದೆ ನನ್ನ ಮಗುವನ್ನು ನೀವೇ ನೋಡಿಕೊಳ್ಳಿ. ನನ್ನ ಜೀವನ ಮುಗಿದಂತಾಗಿದೆ” ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಬಳಿಕ ಅವರ ಮೊಬೈಲ್‌ಗೆ ಮರು ಕರೆ ಮಾಡಿದಾಗ, ನೆರೆಹೊರೆಯವರು ಕರೆ ಸ್ವೀಕರಿಸಿ ಸಂಧ್ಯಾ ಅವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಆಂಬುಲೆನ್ಸ್ ಮೂಲಕ ಬಂಟ್ವಾಳ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.


ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದಾಗ, ವೈದ್ಯರು ಸಂಧ್ಯಾ ಅವರು ವಿಷ ಪದಾರ್ಥ ಸೇವನೆಯಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಪತಿಯ ಕಿರುಕುಳದಿಂದ ಬೇಸತ್ತು ಮನನೊಂದು ಸಂಧ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತೆಯ ಸಹೋದರ ಸಂದೀಪ್ ದೂರಿನಲ್ಲಿ ಆರೋಪಿಸಿದ್ದಾರೆ.


ಪ್ರಕರಣ ದಾಖಲಿಸಿಕೊಂಡಿರುವ ಪುಂಜಾಲಕಟ್ಟೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Tags:

Post a Comment

0 Comments

Post a Comment (0)
3/related/default