ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದಾರೆ. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮವನ್ನು ತೀವ್ರವಾಗಿ ಟೀಕಿಸಿ, ಇದು ನಿಜವಾದ ಅಭಿಮಾನೋತ್ಸವವಲ್ಲ, ಬದಲಾಗಿ ಬಿಜೆಪಿ ನಾಯಕರನ್ನು ಬ್ಲ್ಯಾಕ್ಮೇಲ್ ಮಾಡಲು ಆಯೋಜಿಸಿರುವ “ಬ್ಲ್ಯಾಕ್ಮೇಲೋತ್ಸವ” ಎಂದು ವ್ಯಂಗ್ಯವಾಡಿದರು.
ನಾಳೆ ನಡೆಯಲಿರುವ ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದ ಹಿಂದಿನ ಉದ್ದೇಶವೇ ವಿಜಯೇಂದ್ರ ಅವರ ರಾಜಕೀಯ ಭವಿಷ್ಯವನ್ನು ಭದ್ರಪಡಿಸುವುದು ಎಂದು ಯತ್ನಾಳ್ ಆರೋಪಿಸಿದರು. ದೃತರಾಷ್ಟ್ರನ ಮುಂದೆ ದುರ್ಯೋಧನನಿಗೆ ಪಟ್ಟ ಕಟ್ಟುವ ರೀತಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಹಾಭಾರತದ ಉದಾಹರಣೆ ನೀಡಿ ಟೀಕಿಸಿದರು. ನವೆಂಬರ್ ತಿಂಗಳಲ್ಲಿ ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಅವಧಿ ಮುಗಿಯಲಿದ್ದು, ಅದನ್ನು ಮುಂದುವರಿಸಲು ಬಿಜೆಪಿ ಹೈಕಮಾಂಡ್ಗೆ ಶಕ್ತಿ ಪ್ರದರ್ಶನ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು. ಪಕ್ಷದೊಳಗೆ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂಬ ಸಂದೇಶವನ್ನು ಅವರು ಪರೋಕ್ಷವಾಗಿ ನೀಡಿದರು.
ಯಡಿಯೂರಪ್ಪ ಅವರ ಐವತ್ತು ವರ್ಷದ ರಾಜಕೀಯ ಜೀವನವನ್ನೂ ಇದೇ ವೇಳೆ ಯತ್ನಾಳ್ ಕಟುವಾಗಿ ಟೀಕಿಸಿದರು. ಅವರು ಮಾಡಿರುವ ಒಳ್ಳೆಯ ಕೆಲಸಗಳಿಗಿಂತ ನೂರು ಪಟ್ಟು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ ಯತ್ನಾಳ್, ಅದಕ್ಕಾಗಿಯೇ ಅವರು ಜೈಲು ಸೇರಿದ್ದರು ಎಂದರು. ಈಗಲೂ ಅವರು ಹೊರಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಅಡ್ಜಸ್ಟ್ಮೆಂಟ್ ರಾಜಕಾರಣವೇ ಕಾರಣ ಎಂದು ಗಂಭೀರ ಆರೋಪ ಮಾಡಿದರು. ಇಲ್ಲದಿದ್ದರೆ ಅವರು ಇಷ್ಟೊತ್ತಿಗಾಗಲೇ ಮತ್ತೆ ಜೈಲಿನಲ್ಲಿರಬೇಕಾಗಿತ್ತು ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದರು.
ಲಿಂಗಾಯತ ಮಠಗಳಿಗೆ ನೀಡಲಾಗುತ್ತಿರುವ ಅನುದಾನದ ವಿಚಾರವನ್ನೂ ಪ್ರಸ್ತಾಪಿಸಿದ ಯತ್ನಾಳ್, ಎರಡು-ಮೂರು ಕೋಟಿ ರೂಪಾಯಿ ಅನುದಾನ ನೀಡುವುದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಾಜದ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಪಕ್ಷದಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, ತಮ್ಮನ್ನು ಯಾರೂ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿದರು. ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಡಿ.ವಿ. ಸದಾನಂದ ಗೌಡ ಮತ್ತು ಬಸವರಾಜ ಬೊಮ್ಮಾಯಿ ಅವರು ಮೂಲೆಗುಂಪಾಗಿರಬಹುದು, ಆದರೆ ನಾನು ಜನಾನುರಾಗಿ ನಾಯಕನಾಗಿದ್ದೇನೆ ಎಂದು ಹೇಳಿದರು. ವಿಜಯಪುರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ ವೇಳೆ, ಅವರಿಗಿಂತ ನನಗೇ ಹೆಚ್ಚು ಚಪ್ಪಾಳೆ ಬಿದ್ದಿತ್ತು. ನನ್ನ ಲೆವಲ್ ಸಿಎಂ ಲೆವಲ್ಗಿಂತಲೂ ಹೆಚ್ಚಿದೆ ಎಂದು ಹೇಳುವ ಮೂಲಕ ತಮ್ಮ ಜನಪ್ರಿಯತೆಯನ್ನು ಯತ್ನಾಳ್ ಹೊಗಳಿಕೊಂಡರು.
ಇದೇ ವೇಳೆ ತಾವು ಎಂದಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೋಗಿ ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ರಾಜಕೀಯ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದರು.
ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಸುಳಿವು ನೀಡಿದ ಯತ್ನಾಳ್, ಮುಂದಿನ ಆರು ತಿಂಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದರು. ಜನರ ಅಭಿಪ್ರಾಯ ಸಂಗ್ರಹಿಸಿ ಹೊಸ ಪಕ್ಷ ಸ್ಥಾಪನೆ ಮಾಡಬೇಕೇ ಅಥವಾ ಮುಂದಿನ ರಾಜಕೀಯ ನಿರ್ಧಾರ ಏನು ಎಂಬುದನ್ನು ತೀರ್ಮಾನ ಮಾಡುತ್ತೇನೆ ಎಂದರು. ಯಡಿಯೂರಪ್ಪ ಅಂದರೆ ಬಿಜೆಪಿ ಎಂಬಂತಾಗಿರುವುದು ಪಕ್ಷದ ದುರಂತದ ಪರಿಸ್ಥಿತಿ ಎಂದು ಟೀಕಿಸಿದ ಅವರು, ಪರ್ಯಾಯ ನಾಯಕರನ್ನು ಬೆಳೆಸಲು ಅವಕಾಶ ನೀಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್
ಬಿ ಎಸ್ ಯಡಿಯೂರಪ್ಪ
ಬಿ ವೈ ವಿಜಯೇಂದ್ರ
ಬಿಜೆಪಿ ಕರ್ನಾಟಕ
ಯತ್ನಾಳ್ ಹೇಳಿಕೆ
ಯಡಿಯೂರಪ್ಪ ಅಭಿಮಾನೋತ್ಸವ
ಕರ್ನಾಟಕ ಬಿಜೆಪಿ ರಾಜಕೀಯ
ವಿಜಯೇಂದ್ರ ಅಧ್ಯಕ್ಷ ಅವಧಿ
ಹೊಸ ಪಕ್ಷ ಸುಳಿವು
ಯತ್ನಾಳ್ vs ಯಡಿಯೂರಪ್ಪ Basanagouda Patil Yatnal
BS Yediyurappa
BY Vijayendra
Karnataka BJP
BJP Politics
Yatnal Statement
Koppal News
Karnataka Political News
Siddaramaiah
DK Shivakumar
