ತಮಿಳುನಾಡು: ಇತ್ತೀಚಿನ ಚುನಾವಣಾ ಸೋಲಿನ ಬಳಿಕ ಆಂತರಿಕ ಭಿನ್ನಮತ ಮತ್ತು ಬಂಡಾಯ ಚಟುವಟಿಕೆಗಳಿಂದ ಬಳಲುತ್ತಿರುವ ಎಐಎಡಿಎಂಕೆಗೆ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದೆ. ಪಕ್ಷದ ಮೂವರು ಶಾಸಕರು ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೇರ್ಪಡೆಯಾಗಿರುವುದು ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಶಾಸಕಿಯರಾದ ಮರಗತಂ ಕುಮಾರವೇಲ್, ಸತ್ಯಭಾಮ ಹಾಗೂ ಶಾಸಕ ಜಯಕುಮಾರ್ ತಮ್ಮ ರಾಜೀನಾಮೆ ಪತ್ರಗಳನ್ನು ತಮಿಳುನಾಡು ವಿಧಾನಸಭಾ ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರಿಗೆ ಸಲ್ಲಿಸಿದ್ದಾರೆ. ಮಧುರಾಂತಕಂ ಕ್ಷೇತ್ರದಿಂದ ಮರಗತಂ ಕುಮಾರವೇಲ್, ಧಾರಾಪುರಂ ಕ್ಷೇತ್ರದಿಂದ ಸತ್ಯಭಾಮ ಹಾಗೂ ಪೆರುಂದುರೈ ಕ್ಷೇತ್ರದಿಂದ ಜಯಕುಮಾರ್ ಎಐಎಡಿಎಂಕೆ ಅಭ್ಯರ್ಥಿಗಳಾಗಿ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದರು. ಇದೀಗ ಅವರು ಪಕ್ಷ ತೊರೆದು ಟಿವಿಕೆ ಸೇರ್ಪಡೆಯಾಗಿರುವುದು ಎಐಎಡಿಎಂಕೆ ನಾಯಕರಿಗೆ ಮತ್ತೊಂದು ದೊಡ್ಡ ರಾಜಕೀಯ ಆಘಾತವಾಗಿ ಪರಿಣಮಿಸಿದೆ.
ಮುಖ್ಯಮಂತ್ರಿ ವಿಜಯ್ ಅವರಿಗೆ ಡಿಎಂಕೆ ಮೈತ್ರಿಕೂಟದ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಹೊರಗಿನ ಬೆಂಬಲ ನೀಡಿದ್ದರೂ, ಸರ್ಕಾರ ಸ್ಥಾಪನೆಯ ವೇಳೆ ಎಐಎಡಿಎಂಕೆಯ ಹಿರಿಯ ನಾಯಕ ಸಿ.ವಿ. ಷಣ್ಮುಗಂ ನೇತೃತ್ವದಲ್ಲಿ 25 ಮಂದಿ ಶಾಸಕರು ವಿಜಯ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಈ ಬೆಳವಣಿಗೆಯ ನಂತರವೇ ಎಐಎಡಿಎಂಕೆ ಎರಡು ಬಣಗಳಾಗಿ ವಿಭಜನೆಯಾಗಿ ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗಿತ್ತು.
ಈಗ ಮೂವರು ಶಾಸಕರ ರಾಜೀನಾಮೆ ಹಾಗೂ ಇನ್ನೂ ಐವರು ಶಾಸಕರು ಪಳನಿಸ್ವಾಮಿ ಬಣಕ್ಕೆ ಮರಳಿರುವ ಪರಿಣಾಮ, ಎಐಎಡಿಎಂಕೆಯ ಬಂಡಾಯ ಬಣದ ಬಲವು 25ರಿಂದ 17ಕ್ಕೆ ಕುಸಿದಿದೆ. ಇದರಿಂದ ಪಕ್ಷದ ಒಳರಾಜಕೀಯ ಮತ್ತಷ್ಟು ಗೊಂದಲಕ್ಕೆ ತಳ್ಳಲ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಸಕರು ಬಣ ಬದಲಾಯಿಸುವ ಸಾಧ್ಯತೆಗಳ ಕುರಿತೂ ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಇದೀಗ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಪೂರ್ಣ ಬಹುಮತವಿಲ್ಲದೇ ಅಧಿಕಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಇತರ ಪಕ್ಷಗಳ ಶಾಸಕರನ್ನು ಸೆಳೆದು ತಮ್ಮ ಸ್ಥಾನಬಲವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ತಮಿಳುನಾಡಿನ ರಾಜಕೀಯ ಬೆಳವಣಿಗೆಗಳು ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿವೆ.
ಒಟ್ಟು 234 ಸದಸ್ಯರ ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರಿಂದ ಒಂದು ಸ್ಥಾನ ಈಗಾಗಲೇ ತೆರವಾಗಿದೆ. ಟಿವಿಕೆ ಪಕ್ಷದ ಬಳಿ ಪ್ರಸ್ತುತ 107 ಶಾಸಕರಿದ್ದು, ಕಾಂಗ್ರೆಸ್ನ 5 ಮಂದಿ ಶಾಸಕರು, ಎಡಪಕ್ಷಗಳ 4 ಮಂದಿ ಶಾಸಕರು, ವಿಸಿಕೆ ಹಾಗೂ ಐಯುಎಂಎಲ್ ಪಕ್ಷಗಳ ತಲಾ ಇಬ್ಬರು ಶಾಸಕರು ಮತ್ತು ಒಬ್ಬ ಸ್ವತಂತ್ರ ಶಾಸಕರ ಬೆಂಬಲ ಸರ್ಕಾರಕ್ಕೆ ಲಭ್ಯವಾಗಿದೆ.
ಈ ಮೂವರು ಶಾಸಕರ ರಾಜೀನಾಮೆಯಿಂದ ಸದನದ ಒಟ್ಟು ಬಲ ಇದೀಗ 230ಕ್ಕೆ ಇಳಿದಿದ್ದು, ಬಹುಮತದ ಸಂಖ್ಯೆಯೂ 116ಕ್ಕೆ ಕುಸಿದಿದೆ. ಮುಂದಿನ ಉಪಚುನಾವಣೆಯಲ್ಲಿ ಈ ಮೂರು ಕ್ಷೇತ್ರಗಳ ಜೊತೆಗೆ ವಿಜಯ್ ರಾಜೀನಾಮೆಯಿಂದ ತೆರವಾದ ಕ್ಷೇತ್ರದಲ್ಲಿಯೂ ಟಿವಿಕೆ ಜಯ ಸಾಧಿಸಿದರೆ, ಪಕ್ಷದ ಸ್ಥಾನಬಲ 111ಕ್ಕೆ ಏರಿಕೆಯಾಗಲಿದೆ. ಆಗ ಸರ್ಕಾರಕ್ಕೆ ಸ್ಪಷ್ಟ ಬಹುಮತ ಪಡೆಯಲು ಕೇವಲ ಏಳು ಸ್ಥಾನಗಳ ಕೊರತೆಯಷ್ಟೇ ಉಳಿಯಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳು ನಡೆಯುತ್ತಿವೆ.

