ಬೆಂಗಳೂರು, ಜೂ.4: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯುವಕರನ್ನು ಪಕ್ಷದೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಘೋಷಿಸಿರುವ ‘ಭಾರತ್ ಜೋಡೋ ಯುವಕ ಸಂಘ’ ಯೋಜನೆ ಕಾಂಗ್ರೆಸ್ ಪಕ್ಷದ ನಿರಾಶ್ರಿತರಿಗೆ ಆಶ್ರಯ ಕೇಂದ್ರವಾಗಿ ಪರಿಣಮಿಸಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಯುವಕ ಸಂಘದ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರುಗಳಿಗೆ ಹೊಸ ವೇದಿಕೆ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. “ಡಿ.ಕೆ. ಅಣ್ಣ, ಭಾರತ್ ಜೋಡೋ ಮಾಡುವುದಕ್ಕಿಂತ ಮೊದಲು ಕರ್ನಾಟಕ ಜೋಡೋ ಮಾಡಿ. ಭಾರತ ತುಂಬಾ ದೊಡ್ಡ ದೇಶ. ರಾಜ್ಯದ ಸಮಸ್ಯೆಗಳನ್ನೇ ಮೊದಲು ಪರಿಹರಿಸಿ” ಎಂದು ಅವರು ಕುಹಕವಾಡಿದರು.
ಯುವಕರನ್ನು ಒಗ್ಗೂಡಿಸುವ ಕುರಿತು ಮುಖ್ಯಮಂತ್ರಿ ನೀಡಿರುವ ಹೇಳಿಕೆಯನ್ನು ಪ್ರಶ್ನಿಸಿದ ಅಶೋಕ್, “ಇಷ್ಟು ದಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯುವಕರನ್ನು ಹಾಳು ಮಾಡುತ್ತಿದ್ದರಾ? ಈಗ ಮಾತ್ರ ಯುವಕರ ಅಭಿವೃದ್ಧಿಯ ಬಗ್ಗೆ ನೆನಪಾಗಿದೆಯೇ?” ಎಂದು ವ್ಯಂಗ್ಯವಾಡಿದರು. ಅಲ್ಲದೆ, ಭಾರತ್ ಜೋಡೋ ಯುವಕ ಸಂಘವು ಕಾಂಗ್ರೆಸ್ ಪಕ್ಷದ ನಿರುದ್ಯೋಗಿ ಕಾರ್ಯಕರ್ತರಿಗೆ ಪಿಂಚಣಿ ಯೋಜನೆಯಂತಾಗಿದೆ ಎಂದು ಟೀಕಿಸಿದರು. ವರದಿ ಸುದ್ದಿ ಲೈವ್ ಡಾಟ್ ಕಾಮ್
ರಾಜ್ಯದಲ್ಲಿ ಹೊಸ ನೇಮಕಾತಿಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಘೋಷಿಸಿರುವುದರ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದರು. “ಸರ್ಕಾರದ ಬಳಿ ಹಣವೇ ಇಲ್ಲ. ಕಳೆದ ಮೂರು ವರ್ಷಗಳಿಂದ ಖೋತಾ ಬಜೆಟ್ ಮಂಡಿಸಿ, ತೆರಿಗೆಗಳ ಮೂಲಕ ಜನರ ಮೇಲೆ ಹೆಚ್ಚಿನ ಹೊರೆ ಹಾಕಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ನೇಮಕಾತಿಗೆ ಬೇಕಾದ ಹಣವನ್ನು ಎಲ್ಲಿಂದ ತರಲಾಗುತ್ತದೆ?” ಎಂದು ಪ್ರಶ್ನಿಸಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ಅನೇಕ ಘೋಷಣೆಗಳನ್ನು ಮಾಡಿದ್ದರು. ಆದರೆ ಅವುಗಳಿಗೆ ಅಗತ್ಯವಾದ ಅನುದಾನವನ್ನು ಮೀಸಲಿರಿಸಲಿಲ್ಲ. ಈಗ ಹೊಸ ಸರ್ಕಾರ ಕೂಡ ಅದೇ ರೀತಿಯ ಘೋಷಣೆಗಳನ್ನು ಮಾಡುತ್ತಿದ್ದು, ಇದು ಕೇವಲ ಪ್ರಚಾರಕ್ಕಾಗಿ ಮಾಡಲಾಗುತ್ತಿರುವ ಕ್ರಮವೇ ಹೊರತು ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅಶೋಕ್ ಆರೋಪಿಸಿದರು.
ನೂತನ ಸಚಿವ ಸಂಪುಟ ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಹೊಸ ಮುಖಗಳಿಗೆ ಅವಕಾಶ ಕಲ್ಪಿಸದೇ, ಹಳೆಯ ಮುಖಗಳನ್ನೇ ಮುಂದುವರಿಸಲಾಗಿದೆ ಎಂದು ಟೀಕಿಸಿದರು. ವರದಿ ಸುದ್ದಿ ಲೈವ್ ಡಾಟ್ ಕಾಮ್
ನಿನ್ನೆ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದ ಬಗ್ಗೆ ಮಾತನಾಡಿದ ಅಶೋಕ್, “ಇದು ಹಳೆಯ ಸಿನಿಮಾಗೆ ಹೊಸ ಪೋಸ್ಟರ್ ಅಂಟಿಸಿದಂತಾಗಿದೆ. ಸರ್ಕಾರ ಬದಲಾದರೆ ಜನರ ಬದುಕು ಬದಲಾಗುತ್ತದೆ, ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ರಾಜ್ಯದ ಜನರು ನಿರೀಕ್ಷಿಸಿದ್ದರು. ಆದರೆ ಬದಲಾಗಿರುವುದು ಮುಖ್ಯಮಂತ್ರಿ ನಿವಾಸದ ಮುಂದೆ ಇರುವ ನೇಮ್ ಪ್ಲೇಟ್ ಮಾತ್ರ” ಎಂದು ವ್ಯಂಗ್ಯವಾಡಿದರು.
ರಾಜ್ಯದ ಆಡಳಿತ ವೈಫಲ್ಯಗಳ ಕುರಿತು ಉಲ್ಲೇಖಿಸಿದ ಅವರು, ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು. ಆರ್ಸಿಬಿ ಸಂಭ್ರಮಾಚರಣೆ ವೇಳೆ ಸಂಭವಿಸಿದ ಸಾವುಗಳು, ಬಾಣಂತಿಯರ ಸಾವಿನ ಪ್ರಕರಣಗಳು, ಆಸ್ಪತ್ರೆ ಗೋಡೆ ಕುಸಿತದಿಂದಾದ ದುರ್ಘಟನೆಗಳು ಹಾಗೂ ಬೆಂಗಳೂರಿನ ಹದಗೆಟ್ಟ ರಸ್ತೆ ಪರಿಸ್ಥಿತಿಗಳು ಜನರ ಮನಸ್ಸಿನಲ್ಲಿ ಇನ್ನೂ ನೋವಿನ ಗಾಯಗಳಾಗಿ ಉಳಿದಿವೆ ಎಂದು ಹೇಳಿದರು. ವರದಿ ಸುದ್ದಿ ಲೈವ್ ಡಾಟ್ ಕಾಮ್
ರಾಜ್ಯದ ಜನರು ಉತ್ತಮ ಆಡಳಿತವನ್ನು ನಿರೀಕ್ಷಿಸಿದ್ದರು. ಆದರೆ ಆಡಳಿತ ಸುಧಾರಣೆ ಮಾಡುವ ಬದಲು ಕಾಂಗ್ರೆಸ್ ಸರ್ಕಾರ ಕೇವಲ ಕುರ್ಚಿ ಬದಲಾವಣೆಯಲ್ಲಿ ತೊಡಗಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ರಾಜಕೀಯ ಪ್ರದರ್ಶನಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದರು.
📢 SUDDI LIVE WhatsApp Community
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE WhatsApp Community ಸೇರಿ.
📲 Join WhatsApp Community📢 SUDDI LIVE Facebook Page
ತಾಜಾ ಸುದ್ದಿಗಳು, ಬ್ರೇಕಿಂಗ್ ನ್ಯೂಸ್, ರಾಜಕೀಯ, ಕ್ರೀಡೆ, ಮನರಂಜನೆ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ SUDDI LIVE Facebook ಪೇಜ್ ಅನ್ನು Follow ಮಾಡಿ.
👍 Follow SUDDI LIVEನಿಮ್ಮ ಬೆಂಬಲವೇ ನಮ್ಮ ಶಕ್ತಿ ❤️

