ಮಂಗಳೂರು, ಮೇ 14: ರಾಜ್ಯ ಸರ್ಕಾರ ಹಿಜಾಬ್ ಮೇಲಿನ ನಿಷೇಧವನ್ನು ಹಿಂಪಡೆಯಲು ಮುಂದಾಗಿರುವ ವಿಚಾರಕ್ಕೆ ಇದೀಗ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್, ಸರ್ಕಾರದ ನಿರ್ಧಾರವನ್ನು ಖಂಡಿಸಿ ಕಿಡಿಕಾರಿದ್ದಾರೆ. ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಮಾನತೆಯ ಕೇಂದ್ರಗಳಾಗಿರಬೇಕು. ಆದರೆ ಶಿಕ್ಷಣ ಸಂಸ್ಥೆಗಳ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಸರ್ಕಾರವೇ ಮತಾಂಧತೆಯನ್ನು ಶಿಕ್ಷಣ ಕ್ಷೇತ್ರದೊಳಗೆ ತರುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಆರೋಪಿಸಿದರು.
ಹಿಜಾಬ್ಗೆ ಅವಕಾಶ ನೀಡುವ ಮೂಲಕ ಸರ್ಕಾರ ಕೇವಲ ಒಂದು ಧಾರ್ಮಿಕ ವಸ್ತ್ರಕ್ಕೆ ಮಾನ್ಯತೆ ನೀಡುತ್ತಿರುವುದಲ್ಲ, ಬದಲಿಗೆ ಶಿಸ್ತುಬದ್ಧ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡುವ ಪ್ರಯತ್ನ ನಡೆಸುತ್ತಿದೆ ಎಂದು ಶರಣ್ ಪಂಪುವೆಲ್ ಅಭಿಪ್ರಾಯಪಟ್ಟರು. ಇದು ಓಲೈಕೆ ರಾಜಕಾರಣದ ಪರಮಾವಧಿಯಾಗಿದ್ದು, ಸಮಾಜದಲ್ಲಿ ಮತ್ತೆ ವಿಭಜನೆಯ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಟೀಕಿಸಿದರು.
ವಿದ್ಯಾರ್ಥಿಗಳ ನಡುವೆ ಹಿಜಾಬ್ ವಿಚಾರದ ಮೂಲಕ ವಿಷಬೀಜ ಬಿತ್ತಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ಧರ್ಮ, ಜಾತಿ ಹಾಗೂ ರಾಜಕೀಯಗಳಿಂದ ದೂರವಿರಬೇಕು. ಆದರೆ ಸರ್ಕಾರದ ಇಂತಹ ನಿರ್ಧಾರಗಳು ವಿದ್ಯಾರ್ಥಿಗಳಲ್ಲಿ ಅಶಾಂತಿ ಮತ್ತು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಕ್ರಮದಿಂದ ಶಾಲಾ-ಕಾಲೇಜುಗಳ ಶಿಸ್ತು ಹಾಗೂ ಏಕತೆ ಹದಗೆಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಇದೇ ವೇಳೆ ಸರ್ಕಾರದ ವಿರುದ್ಧ ಯುವಜನತೆ ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಕರೆ ನೀಡಿದ ಅವರು, “ಹಿಜಾಬ್ ಪ್ರೇಮಿ ಸರ್ಕಾರದ ಈ ನಿರ್ಧಾರವನ್ನು ರಾಜ್ಯದ ಯುವಶಕ್ತಿ ತೀವ್ರವಾಗಿ ವಿರೋಧಿಸಬೇಕು. ವಿದ್ಯಾರ್ಥಿಗಳ ಭವಿಷ್ಯವನ್ನು ರಾಜಕೀಯದ ಭಾಗವನ್ನಾಗಿಸಲು ಯಾರಿಗೂ ಅವಕಾಶ ನೀಡಬಾರದು” ಎಂದು ಹೇಳಿದರು.
ತುಘಲಕ್ ಸರ್ಕಾರದ ವಿರುದ್ಧ ನಡೆಯುವ ಹೋರಾಟಗಳಿಗೆ ವಿಶ್ವ ಹಿಂದೂ ಪರಿಷದ್ ಹಾಗೂ ಅದರ ಯುವ ವಿಭಾಗಗಳಾದ ಬಜರಂಗ ದಳ ಮತ್ತು ದುರ್ಗಾವಾಹಿನಿ ಸಂಪೂರ್ಣ ಬೆಂಬಲ ನೀಡಲಿವೆ ಎಂದು ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
