ಉತ್ತರ ಕನ್ನಡದಲ್ಲಿ ಭೀಕರ ದುರಂತ: ನದಿಯಲ್ಲಿ ಕೊಚ್ಚಿ ಹೋಗಿ ಒಂದೇ ಕುಟುಂಬದ 11 ಮಂದಿ ಸಾವು

suddilive.com
By -
0


 ಉತ್ತರ ಕನ್ನಡ: ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟಿಹಕ್ಕಲಾ ನದಿಯಲ್ಲಿ ಭಾನುವಾರ ಸಂಭವಿಸಿದ ಭೀಕರ ದುರಂತದಲ್ಲಿ ಒಂದೇ ಕುಟುಂಬದ 11 ಮಂದಿ ನೀರುಪಾಲಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಸಮುದ್ರ ಸೇರುವ ನದಿ ಮುಖದ ಪ್ರದೇಶದಲ್ಲಿ ಶಂಖ-ಚಿಪ್ಪು ಸಂಗ್ರಹಿಸಲು ತೆರಳಿದ್ದ ಕುಟುಂಬದ ಸದಸ್ಯರು ಏಕಾಏಕಿ ಹೆಚ್ಚಾದ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. 


ಮೂಲಗಳ ಪ್ರಕಾರ, ಪಡು ಶಿರಾಲಿ ಪ್ರದೇಶದ ಒಂದೇ ಕುಟುಂಬಕ್ಕೆ ಸೇರಿದ 14 ಮಂದಿ ಭಾನುವಾರ ಬೆಳಗ್ಗೆ ತಟ್ಟಿಹಕ್ಕಲಾ ನದಿಯ ಡೆಲ್ಟಾ ಭಾಗಕ್ಕೆ ತೆರಳಿದ್ದರು. ಕರಾವಳಿ ಭಾಗಗಳಲ್ಲಿ ಸಾಮಾನ್ಯವಾಗಿ ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ನದಿ-ಸಮುದ್ರ ಸಂಗಮ ಪ್ರದೇಶದಲ್ಲಿ ಶಂಖ ಹಾಗೂ ಚಿಪ್ಪುಗಳನ್ನು ಸಂಗ್ರಹಿಸುವ ಉಪವೃತ್ತಿ ನಡೆಸುತ್ತಾರೆ. ಇದೇ ಉದ್ದೇಶದಿಂದ ಕುಟುಂಬದ ಸದಸ್ಯರು ನೀರಿಗೆ ಇಳಿದಿದ್ದ ವೇಳೆ ಏಕಾಏಕಿ ಪ್ರವಾಹದ ವೇಗ ಹೆಚ್ಚಾಗಿದೆ. 


ಭಾರೀ ಮಳೆಯ ಪರಿಣಾಮ ಕಳೆದ ಎರಡು ದಿನಗಳಿಂದ ಸಮುದ್ರ ಅಲೆಗಳು ಪ್ರಚಂಡವಾಗಿದ್ದವು. ಇದರಿಂದ ನದಿಯಲ್ಲಿಯೂ ನೀರಿನ ಹರಿವು ಅಸ್ಥಿರಗೊಂಡಿತ್ತು. ಸ್ಥಳೀಯರ ಮಾಹಿತಿ ಪ್ರಕಾರ, ಸಮುದ್ರದ ಅಲೆಗಳ ಪ್ರಭಾವದಿಂದ ನದಿಯ ನೀರಿನ ಮಟ್ಟ ಏಕಾಏಕಿ ಏರಿಳಿತ ಕಂಡು, ಆಳವಾದ ಭಾಗದತ್ತ ಪ್ರವಾಹ ಎಳೆದೊಯ್ದಿದೆ. ಪರಿಣಾಮ ಕುಟುಂಬದ ಬಹುತೇಕ ಸದಸ್ಯರು ನೀರಿನಲ್ಲಿ ಮುಳುಗಿದ್ದಾರೆ. 


ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಮುಂದಾಗಿ ಮೂವರನ್ನು ಜೀವಂತವಾಗಿ ರಕ್ಷಿಸಿದ್ದಾರೆ. ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಉಳಿದ ಇಬ್ಬರಿಗೆ ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 


ಇಲ್ಲಿಯವರೆಗೆ ಎಂಟು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದು, ಅವರನ್ನು ಹುಡುಕಲು ಪೊಲೀಸರು, ಅಗ್ನಿಶಾಮಕ ದಳ ಹಾಗೂ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. 


ಮೃತರನ್ನು ಲಕ್ಷ್ಮೀ ಮಹದೇವ ನಾಯ್ಕ (42), ಉಮೇಶ್ ನಾಯ್ಕ (30), ಲಕ್ಷ್ಮೀ ನಾಯ್ಕ (30), ಲಕ್ಷ್ಮೀ ಅಣ್ಣಪ್ಪ ನಾಯ್ಕ (60), ಲಕ್ಷ್ಮೀ ಶಿವರಾಮ ನಾಯ್ಕ (49), ಜ್ಯೋತಿ ನಾಯ್ಕ (34), ಮಾಲತಿ ನಾಯ್ಕ (38) ಹಾಗೂ ಮಸ್ತಮ್ಮ ನಾಯ್ಕ ಎಂದು ಗುರುತಿಸಲಾಗಿದೆ. ಉಳಿದವರ ಗುರುತು ಹಾಗೂ ನಾಪತ್ತೆಯಾದವರ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. 


ಘಟನೆ ಬಳಿಕ ಪಡು ಶಿರಾಲಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಒಂದೇ ಕುಟುಂಬದ ಅನೇಕ ಸದಸ್ಯರನ್ನು ಕಳೆದುಕೊಂಡಿರುವುದರಿಂದ ಗ್ರಾಮಸ್ಥರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಸ್ಥಳಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



Tags:

Post a Comment

0 Comments

Post a Comment (0)
3/related/default