ಮಂಗಳೂರು: ವಿಧಾನಸಭೆ ಸ್ಪೀಕರ್ ಹಾಗೂ ಉಳ್ಳಾಲ ಶಾಸಕ U. T. Khader ಅವರಿಗೆ ಘೇರಾವ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಖಾದರ್ ಅವರ ಅಂಗರಕ್ಷಕ ಮೊಹಮ್ಮದ್ ಯಾಸಿನ್ ನೀಡಿದ ದೂರಿನ ಆಧಾರದ ಮೇಲೆ ಮದನಿನಗರ ನಿವಾಸಿ ಜುನೈದ್ ಸೇರಿದಂತೆ ಒಟ್ಟು 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಕೆಲ ಯುವಕರು ಸ್ಪೀಕರ್ ಯು.ಟಿ. ಖಾದರ್ ಅವರನ್ನು ತಡೆದು ಪ್ರಶ್ನೆ ಮಾಡಿ ಘೇರಾವ್ ಹಾಕಿದ್ದರು. ಈ ವೇಳೆ ಮಾತಿನ ಚಕಮಕಿ ಮತ್ತು ವಾಗ್ವಾದವೂ ನಡೆದಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಕಾರ್ಯಕ್ರಮದ ವೇಳೆ ಉಂಟಾದ ಉದ್ವಿಗ್ನ ಪರಿಸ್ಥಿತಿಯಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.
ಈ ವಿವಾದದ ಕೇಂದ್ರಬಿಂದುವಾಗಿರುವುದು ಕುತ್ತಾರಿನಲ್ಲಿ ನಿರ್ಮಾಣವಾಗುತ್ತಿರುವ “ಕೊರಗಜ್ಜ ಸರ್ಕಲ್” ಆಗಿದೆ. ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಿಂದ ಕುತ್ತಾರು ಭಾಗದಲ್ಲಿ ವೃತ್ತ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದರ ನಿರ್ವಹಣೆಯ ಹೊಣೆಗಾರಿಕೆಯನ್ನು ಸರ್ಕಾರವೇ ಮೆಡಿಕಲ್ ಕಾಲೇಜಿಗೆ ನೀಡಿದೆ ಎನ್ನಲಾಗಿದೆ. ಆದರೆ ಈ ವೃತ್ತ ನಿರ್ಮಾಣದ ಮಾದರಿ, ಹೆಸರು ಹಾಗೂ ಅದರ ಉದ್ದೇಶದ ಬಗ್ಗೆ ಕೆಲವು ಸ್ಥಳೀಯರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಕುತ್ತಾರು ಪ್ರದೇಶವು ತುಳುನಾಡಿನ ಆರಾಧ್ಯ ಕಾರ್ಣಿಕ ದೈವವಾದ ಕೊರಗಜ್ಜನ ಮೂಲ ಕ್ಷೇತ್ರವೆಂದು ಭಕ್ತರು ನಂಬಿಕೆ ಇಟ್ಟಿದ್ದಾರೆ. ಇದೇ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತಿಂಗಳ ಹಿಂದೆಯೇ ವೃತ್ತ ನಿರ್ಮಾಣವಾಗುತ್ತಿರುವ ಜಾಗದಲ್ಲಿ ಕೊರಗಜ್ಜ ದೈವದ ಪ್ರತಿಕೃತಿಯ ಕೆಲವು ವಸ್ತುಗಳನ್ನು ಇರಿಸಿದ್ದರು. ಇದೀಗ ಹೊಸದಾಗಿ ನಿರ್ಮಾಣವಾಗುತ್ತಿರುವ ವೃತ್ತದಲ್ಲೂ ಕೊರಗಜ್ಜ ದೈವದ ಪ್ರತಿಕೃತಿ ಸ್ಥಾಪನೆ ಮಾಡುವ ಹಾಗೂ ಆ ವೃತ್ತಕ್ಕೆ “ಕೊರಗಜ್ಜ ಸರ್ಕಲ್” ಎಂದು ಹೆಸರು ಇಡುವ ಯೋಜನೆ ರೂಪಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ.
ಆದರೆ ಈ ವಿಚಾರವೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು “ಕೊರಗಜ್ಜ” ಎಂಬ ಹೆಸರಿನ ಬಳಕೆಯ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ವೃತ್ತದ ನಿರ್ಮಾಣ ವೈಜ್ಞಾನಿಕವಾಗಿಲ್ಲ, ದೊಡ್ಡ ಗಾತ್ರದ ವೃತ್ತದಿಂದ ಸಂಚಾರ ದಟ್ಟಣೆ ಮತ್ತು ವಾಹನ ಸಂಚಾರ ಸಮಸ್ಯೆ ಉಂಟಾಗಬಹುದು ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ವಿರೋಧದ ನಿಜವಾದ ಕಾರಣ ಕೊರಗಜ್ಜ ಹೆಸರಿಗೋ ಅಥವಾ ಕಾಮಗಾರಿಯ ವಿನ್ಯಾಸಕ್ಕೋ ಎಂಬ ಗೊಂದಲವೂ ಸೃಷ್ಟಿಯಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಯು.ಟಿ. ಖಾದರ್, ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಯಾರೋ ಕೆಲವರು ದಾರಿ ತಪ್ಪಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಏನೋ ಹೇಳುತ್ತಾರೆ ಎಂದು ಪ್ರತಿಯೊಂದನ್ನೂ ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ಮದನಿ ನಗರದವರೇ ಅಲ್ಲ, ಬೇರೆ ಸಂಘಟನೆಗಳಿಗೆ ಸೇರಿದವರು. ಹೊರಗಿನಿಂದ ಬಂದವರು ಕೂಡ ಇದ್ದಾರೆ. ಅಲ್ಲಿ ಏನು ಆಗುತ್ತದೋ ಅದು ಒಳ್ಳೆಯದಕ್ಕೇ ಆಗುತ್ತದೆ” ಎಂದು ಖಾದರ್ ಹೇಳಿದ್ದಾರೆ.
ಈ ಘಟನೆ ಇದೀಗ ದಕ್ಷಿಣ ಕನ್ನಡ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ “ಕೊರಗಜ್ಜ ಸರ್ಕಲ್” ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
