ಉಡುಪಿ: ತಾಯಿಯನ್ನೇ ನೆರೆಮನೆಯವಳೆಂದ ಬುರ್ಖಾ ಮಹಿಳೆ?: ಸಚಿವೆ ಲಕ್ಷೀ ಹೆಬ್ಬಾಳ್ಕರ್ ಮುಂದೆ ಹೈಡ್ರಾಮಾ..?

KARNATAKA NEWS LIVE
By -
0

udupi-lakshmi-hebbalkar-hindu-woman-muslim-women-controversy

 ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವೆ Lakshmi Hebbalkar ಅವರನ್ನು ಭೇಟಿ ಮಾಡಲು ಬಂದಿದ್ದ ವೃದ್ಧ ಹಿಂದೂ ಮಹಿಳೆ ಹಾಗೂ ಆಕೆಯೊಂದಿಗೆ ಆಗಮಿಸಿದ್ದ ಇಬ್ಬರು ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರ ಘಟನೆ ಇದೀಗ ಉಡುಪಿ ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಮಹಿಳಾ ಮೋರ್ಚಾ ನಾಯಕಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವೆಯ ಹೇಳಿಕೆಗಳ ವಿರುದ್ಧ ಕಿಡಿಕಾರಿದ್ದಾರೆ.


ಶನಿವಾರ (ಮೇ 16) ಉಡುಪಿ ಗೆಸ್ಟ್‌ಹೌಸ್‌ನಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಗಿರಿಜಾ ಶೆಟ್ಟಿಗಾರ್ ಎಂಬ ವೃದ್ಧ ವಿಧವೆಯನ್ನು ಇಬ್ಬರು ಬುರ್ಖಾ ಧರಿಸಿದ್ದ ಮಹಿಳೆಯರು ಸಚಿವೆಯ ಮುಂದೆ ಕರೆತಂದಿದ್ದರು. ಆ ವೇಳೆ “ಇವರು ಹಿಂದೂ ಮಹಿಳೆ, ನಮ್ಮ ನೆರೆಮನೆಯವರು. ಬಡ ಮಹಿಳೆಗೆ ಮಂಜೂರಾಗಿರುವ ನಿವೇಶನವನ್ನು ನೀಡಿ ಸಹಾಯ ಮಾಡಿ” ಎಂದು ಸಚಿವೆಯ ಮುಂದೆ ಮನವಿ ಮಾಡಿದ್ದರು. ಈ ದೃಶ್ಯ ಕಂಡ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, “ಇದು ನೋಡಿ ನಮ್ಮ ಭಾರತ. ಹಿಂದೂ ಮಹಿಳೆಯ ಪರವಾಗಿ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಉಡುಪಿ ಬಿಜೆಪಿಗರು ಇವರನ್ನು ನೋಡಿ ಕಲಿಯಬೇಕು” ಎಂದು ಪ್ರತಿಕ್ರಿಯಿಸಿದ್ದರು.


ಆದರೆ ಈ ಘಟನೆ ಬಳಿಕ ಹೊಸ ತಿರುವು ಪಡೆದುಕೊಂಡಿದ್ದು, ಸಚಿವೆಯ ಮುಂದೆ ಬಂದಿದ್ದ ಮಹಿಳೆಯರ ಬಗ್ಗೆ ಬಿಜೆಪಿ ನಾಯಕಿಯರು ಪ್ರಶ್ನೆ ಎತ್ತಿದ್ದಾರೆ. ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ Neetha Prabhu ಅವರು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, “ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನಿಜಾಂಶ ತಿಳಿಯದೆ ಸೌಹಾರ್ದತೆಯ ಬಗ್ಗೆ ಉಪದೇಶ ನೀಡಿದ್ದಾರೆ. ಗಿರಿಜಾ ಶೆಟ್ಟಿಗಾರ್ ಅವರನ್ನು ಕರೆತಂದ ಮಹಿಳೆಯರಲ್ಲಿ ಒಬ್ಬರು ಅವರದೇ ಪುತ್ರಿ. ಅವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ತಮ್ಮ ತಾಯಿಯನ್ನು ನೆರೆಮನೆಯ ಮಹಿಳೆ ಎಂದು ಪರಿಚಯಿಸಿ ಸಚಿವೆಯನ್ನೇ ಯಾಮಾರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.


“ಬೆಳಗಾವಿಯಿಂದ ಬಂದಿರುವ ಜಿಲ್ಲಾ ಉಸ್ತುವಾರಿ ಸಚಿವೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಪಾಠ ಹೇಳುವ ಅಗತ್ಯವಿಲ್ಲ. ಅವಸರದಲ್ಲಿ ಮಾತನಾಡಿ ಬಿಜೆಪಿಯನ್ನು ಟೀಕಿಸುವ ಮೂಲಕ ಅವರು ರಾಜಕೀಯ ಪ್ರಚಾರಕ್ಕೆ ಮುಂದಾಗಿದ್ದಾರೆ” ಎಂದು ನೀತಾ ಪ್ರಭು ಕಿಡಿಕಾರಿದ್ದಾರೆ. ಅಲ್ಲದೇ, ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರು ಸಮಸ್ಯೆ ನಿವಾರಣೆಗೆ ಬರುವ ಜನರೊಂದಿಗೆ ಯಾವುದೇ ಜಾತಿ-ಧರ್ಮದ ಭೇದಭಾವ ತೋರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಇದೇ ವೇಳೆ ಕೆಲ ಮುಸ್ಲಿಂ ಮಹಿಳೆಯರು ಹಿಂದೆ ಹಿಜಾಬ್ ಮತ್ತು ಬುರ್ಖಾ ವಿಚಾರದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಿವಾದ ಸೃಷ್ಟಿಸಲು ಮುಂದಾಗಿದ್ದರು. ಈಗ ಅದೇ ರೀತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆಯನ್ನೇ ತಪ್ಪು ಮಾಹಿತಿಯಿಂದ ದಾರಿ ತಪ್ಪಿಸಲಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಆರೋಪಿಸಿದೆ. “ಸ್ವಂತ ತಾಯಿಯನ್ನೇ ನೆರೆಮನೆಯ ಮಹಿಳೆ ಎಂದು ಹೇಳುವ ಮನಸ್ಥಿತಿಯನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು” ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.


ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ Sandhya Ramesh ಕೂಡ ಸಚಿವೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಮಹತ್ವದ ಕೊಡುಗೆ ನೀಡದ ಜಿಲ್ಲಾ ಉಸ್ತುವಾರಿ ಸಚಿವೆಯ ಅವಿವೇಕದ ಮಾತು ಅಕ್ಷಮ್ಯ. ಜಿಲ್ಲೆಯ ಬಿಜೆಪಿ ನಾಯಕರು ಹಾಗೂ ಜನಪ್ರತಿನಿಧಿಗಳ ವಿರುದ್ಧ ಇದೇ ರೀತಿಯ ಬೇಜವಾಬ್ದಾರಿ ಹೇಳಿಕೆ ಮುಂದುವರಿದರೆ ಜಿಲ್ಲಾ ಮಹಿಳಾ ಮೋರ್ಚಾದಿಂದ ತೀವ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.


ಇನ್ನೊಂದೆಡೆ, ವೃದ್ಧ ಮಹಿಳೆಯ ಸಮಸ್ಯೆಗೆ ಮಾನವೀಯ ಆಧಾರದಲ್ಲಿ ಸ್ಪಂದಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. 1990ರಲ್ಲಿ ವಸತಿ ಯೋಜನೆಯಡಿ ಗಿರಿಜಾ ಶೆಟ್ಟಿಗಾರ್ ಅವರಿಗೆ 5 ಸೆಂಟ್ಸ್ ಜಾಗ ಮಂಜೂರಾಗಿದ್ದರೂ, ಅರಣ್ಯ ಇಲಾಖೆ ಆ ಜಾಗವನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಸೇರಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಇದರಿಂದ ಗ್ರಾಮ ಪಂಚಾಯಿತಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ ಎಂಬ ಮಾಹಿತಿ ಸಚಿವೆಗೆ ಲಭಿಸಿದೆ.


ಈ ಹಿನ್ನೆಲೆಯಲ್ಲಿ ಮಹಿಳೆಯ ಅರ್ಜಿಯನ್ನು ಲಗತ್ತಿಸಿ ಉಡುಪಿ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಸಚಿವೆ, ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ ಮಹಿಳೆಗೆ ನ್ಯಾಯ ಒದಗಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಕೈಗೊಂಡ ಕ್ರಮದ ವರದಿಯನ್ನು ಕೂಡ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

Tags:

Post a Comment

0 Comments

Post a Comment (0)
3/related/default