ಉಡುಪಿ: ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ಬಾರ್ ಹಾಗೂ ರೆಸ್ಟೋರೆಂಟ್ಗಳಿಗೆ ವಾಣಿಜ್ಯ ಬಳಕೆಯ ಅಡುಗೆ ಅನಿಲ (LPG) ಸರಬರಾಜಿನಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಈ ಕೂಡಲೇ ಗ್ಯಾಸ್ ವಿತರಕ ಏಜೆನ್ಸಿಗಳ ವ್ಯವಹಾರದ ಬಗ್ಗೆ ಸಮಗ್ರ 'ಆಡಿಟ್' ನಡೆಸುವಂತೆ ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ನಗರದ ಶಾರದಾ ಹೋಟೆಲ್ನಲ್ಲಿ ಈ ಸಂಬಂಧ ಕರೆಯಲಾಗಿದ್ದ ತುರ್ತು ಸಭೆಯನ್ನುದ್ದೇಶಿಸಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಬಿ. ಗೋವಿಂದ ರಾಜ್ ಹೆಗ್ಡೆ ಅವರು, ಸರ್ಕಾರಕ್ಕೆ ಜಿಎಸ್ಟಿ ಮತ್ತು ಅಬಕಾರಿ ತೆರಿಗೆಯನ್ನು ನಿಯಮಿತವಾಗಿ ಪಾವತಿಸುತ್ತಿರುವ ಉದ್ಯಮಗಳಿಗೆ ಗ್ಯಾಸ್ ಸಿಗುತ್ತಿಲ್ಲ. ಆದರೆ, ಕಾಳಸಂತೆಯಲ್ಲಿ ಮತ್ತು ಕೇಟರಿಂಗ್ ವ್ಯವಹಾರಗಳಿಗೆ ಗ್ಯಾಸ್ ಸುಲಭವಾಗಿ ಲಭ್ಯವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಮಧ್ಯಪ್ರಾಚ್ಯದ ಯುದ್ಧದ ಪರಿಸ್ಥಿತಿಯನ್ನು ನೆಪವಾಗಿಟ್ಟುಕೊಂಡು ಸರಬರಾಜುದಾರರು ಕಳೆದ ಎರಡು ತಿಂಗಳಿಂದ ಗ್ಯಾಸ್ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಪ್ರತಿ ತಿಂಗಳು ಸಾವಿರಾರು ರೂಪಾಯಿ ಜಿಎಸ್ಟಿ ಪಾವತಿಸುವ ಬಾರ್ ಮತ್ತು ರೆಸ್ಟೋರೆಂಟ್ ಉದ್ಯಮಗಳು ಇಂಧನವಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಿಗುವ ಗ್ಯಾಸ್, ಅಧಿಕೃತವಾಗಿ ತೆರಿಗೆ ಪಾವತಿಸುವ ಉದ್ಯಮಗಳಿಗೆ ಮಾತ್ರ ಏಕೆ ಲಭ್ಯವಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ಜಿಲ್ಲೆಯ ಗ್ಯಾಸ್ ಏಜೆನ್ಸಿಗಳು ಯಾರಿಗೆ ಎಷ್ಟು ಸಿಲಿಂಡರ್ ಪೂರೈಕೆ ಮಾಡುತ್ತಿವೆ ಎಂಬ ಬಗ್ಗೆ ಆಡಿಟ್ ನಡೆಸಿ ವಾಸ್ತವಾಂಶವನ್ನು ಬಹಿರಂಗಪಡಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಶೀಘ್ರವೇ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ಈ ಸಮಸ್ಯೆಗೆ ತುರ್ತು ಪರಿಹಾರ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೆಗ್ಡೆ ಎಚ್ಚರಿಸಿದ್ದಾರೆ.
ಈ ಸಭೆಯಲ್ಲಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಮುಖಂಡರಾದ ಸಜ್ಜನ್ ಹೆಗ್ಡೆ ಹಾಗೂ ಹಂಸರಾಜ್ ಶೆಟ್ಟಿ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿ ಅನಿಲ ಕೊರತೆಯಿಂದ ಎದುರಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
Udupi, LPG Shortage, Bar and Restaurant, Wine Merchants Association, Gas Agency Audit, Commercial LPG, Karnataka News
