ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಆಸರೆಯಾಗಬೇಕಿದ್ದ ವ್ಯವಸ್ಥೆಯೇ ಹಳ್ಳ ಹಿಡಿದಿದ್ದು, ಸರ್ಕಾರಿ ಔಷಧಿಗಳನ್ನು ರೋಗಿಗಳಿಗೆ ನೀಡದೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ದಂಧೆ ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಔಷಧಿಗಳ ಕೊರತೆಯಿದೆ ಎಂಬ ಸಬೂಬು ನೀಡಿ ವಾಪಸ್ ಕಳುಹಿಸುತ್ತಿದ್ದ ಸಿಬ್ಬಂದಿಗಳು, ಸರ್ಕಾರದ ವತಿಯಿಂದ ಉಚಿತವಾಗಿ ಸರಬರಾಜಾಗುತ್ತಿದ್ದ ಮಾತ್ರೆ ಹಾಗೂ ಟಾನಿಕ್ಗಳನ್ನು ಯೋಜಿತವಾಗಿ ಗುಜರಿ ಮಾಡುತಿದ್ದರು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಈ ಮಹಾ ಲೂಟಿಯ ಕೇಂದ್ರಬಿಂದುವಾಗಿರುವುದು ಆಸ್ಪತ್ರೆಯ ಡಿ-ದರ್ಜೆ ನೌಕರನ ನಿವಾಸವಾಗಿದ್ದು, ದಾಳಿಯ ಸಂದರ್ಭದಲ್ಲಿ ಆತನ ಮನೆಯಲ್ಲಿ ಬರೋಬ್ಬರಿ 70 ಬಾಕ್ಸ್ಗಳಷ್ಟು ಸರ್ಕಾರಿ ಔಷಧಿಗಳು ಪತ್ತೆಯಾಗಿವೆ. ಆಸ್ಪತ್ರೆಯ ಗೋದಾಮಿನಂತಿರಬೇಕಿದ್ದ ಈ ನೌಕರನ ಮನೆಯಲ್ಲಿ ರಾಜ್ಯ ಸರ್ಕಾರದ ಲೋಗೋ ಇರುವ ಔಷಧಿಗಳ ರಾಶಿಯೇ ಕಂಡುಬಂದಿದೆ. ಕಳೆದ ಮೂರು ವರ್ಷಗಳಿಂದ ಈ ಜಾಲ ಸಕ್ರಿಯವಾಗಿದ್ದು, ಬಡವರು ನೂರಾರು ರೂಪಾಯಿ ಖರ್ಚು ಮಾಡಿ ದೂರದ ಹಳ್ಳಿಗಳಿಂದ ಬಂದಾಗ ಅವರಿಗೆ ಖಾಸಗಿ ಮೆಡಿಕಲ್ ಸ್ಟೋರ್ಗಳಿಗೆ ಹೋಗುವಂತೆ ಚೀಟಿ ಬರೆದುಕೊಡಲಾಗುತ್ತಿತ್ತು. ಹೀಗೆ ರೋಗಿಗಳಿಗೆ ವಂಚಿಸಿ ಉಳಿಸಿದ ಔಷಧಿಗಳನ್ನು ನೌಕರನ ಮನೆಯಲ್ಲಿ ಬಚ್ಚಿಡಲಾಗುತ್ತಿತ್ತು.
ಈ ಅಕ್ರಮದಲ್ಲಿ ಕೇವಲ ಕೆಳಹಂತದ ಸಿಬ್ಬಂದಿ ಮಾತ್ರವಲ್ಲದೆ ಆಸ್ಪತ್ರೆಯ ವೈದ್ಯರು ಕೂಡ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಪ್ರತಿವರ್ಷ ನಡೆಯುವ ಆಡಿಟ್ ಅಥವಾ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಔಷಧಿಗಳೆಲ್ಲವೂ ರೋಗಿಗಳಿಗೆ ಸಮರ್ಪಕವಾಗಿ ವಿತರಣೆಯಾಗಿವೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗುತ್ತಿತ್ತು. ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ವೈದ್ಯಕೀಯ ಸಿಬ್ಬಂದಿಗಳು ವ್ಯವಸ್ಥಿತವಾಗಿ ಲೆಕ್ಕ ತೋರಿಸುತ್ತಿದ್ದರೂ, ವಾಸ್ತವದಲ್ಲಿ ಆ ಔಷಧಿಗಳು ರೋಗಿಗಳ ಕೈ ಸೇರುವ ಬದಲು ಕಳ್ಳಮಾರ್ಗ ಹಿಡಿದಿದ್ದವು ಎಂಬುದು ಈಗ ಸಾಬೀತಾಗಿದೆ.
ಅಕ್ರಮದ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಪ್ರಶ್ನಿಸಿದಾಗ ವೈದ್ಯರು ನೀಡುತ್ತಿರುವ ಸಬೂಬುಗಳು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಆರೋಗ್ಯ ಶಿಬಿರಗಳನ್ನು ನಡೆಸುವ ಉದ್ದೇಶದಿಂದ ಈ ಔಷಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು ಎಂದು ವೈದ್ಯರು ಸಮರ್ಥಿಸಿಕೊಳ್ಳುತ್ತಿದ್ದರೂ, ಸರ್ಕಾರಿ ನಿಯಮದ ಪ್ರಕಾರ ಔಷಧಿಗಳನ್ನು ನೌಕರನ ಮನೆಯಲ್ಲಿ ಇರಿಸಲು ಯಾವುದೇ ಅವಕಾಶವಿಲ್ಲ. ಕಳೆದ ಮೂರು ವರ್ಷಗಳಿಂದ ಈ ಔಷಧಿಗಳು ಶಿಬಿರದ ಹೆಸರಿನಲ್ಲಿ ಧೂಳು ಹಿಡಿಯುತ್ತಿರುವುದನ್ನು ನೋಡಿದರೆ, ಇದು ಕೇವಲ ಸಬೂಬಷ್ಟೇ ಹೊರತು ಬೇರೇನಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
ಸದ್ಯ ಈ ಪ್ರಕರಣ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಬಡವರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವ ಭ್ರಷ್ಟ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಖಾಸಗಿ ಮೆಡಿಕಲ್ ಮಾಫಿಯಾ ಜೊತೆಗೂ ಈ ತಂಡಕ್ಕೆ ನಂಟಿರುವ ಸಂಶಯ ವ್ಯಕ್ತವಾಗಿದ್ದು, ಘಟನೆಯಲ್ಲಿ ಭಾಗಿಯಾಗಿರುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಸರ್ಕಾರ ಮತ್ತು ಆರೋಗ್ಯ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
