ಬೆಂಗಳೂರು, ಮೇ 25: ಮಾಜಿ ಕರ್ನಾಟಕ ರಣಜಿ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ (SL Akshay) ಅವರು ಕೆಎಸ್ಸಿಎ ಲೀಗ್ ಪಂದ್ಯವೊಂದರ ವೇಳೆ ಮೈದಾನದಲ್ಲೇ ಹೃದಯಾಘಾತದಿಂದ ಕುಸಿದು ಮೃತಪಟ್ಟಿದ್ದಾರೆ. ಈ ಘಟನೆ ಬೆಂಗಳೂರಿನ ಬೊಮ್ಮಸಂದ್ರದ ಎಸ್ಎಲ್ಎಸ್ ಕ್ರಿಕೆಟ್ ಮೈದಾನದಲ್ಲಿ ನಡೆದಿರುವುದು ಕ್ರೀಡಾ ವಲಯದಲ್ಲಿ ಆಘಾತ ಮೂಡಿಸಿದೆ.
39 ವರ್ಷದ ಅಕ್ಷಯ್ ಅವರು ಕರ್ನಾಟಕ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದ ಅನುಭವಿ ವೇಗದ ಬೌಲರ್ ಆಗಿದ್ದರು. ಅವರು ಕೆಎಸ್ಸಿಎ ಶ್ರೀ ನಸ್ಸೂರ್ ಮೆಮೋರಿಯಲ್ ಶೀಲ್ಡ್ ಏಕದಿನ ಲೀಗ್ ಪಂದ್ಯದಲ್ಲಿ ಸಫೈರ್ ಕ್ರಿಕೆಟ್ ಕ್ಲಬ್ ಪರವಾಗಿ ಭಾರತ್ ಕ್ರಿಕೆಟ್ ಕ್ಲಬ್ ವಿರುದ್ಧ ಕಣಕ್ಕಿಳಿದಿದ್ದರು. ಪಂದ್ಯದ ವೇಳೆ ನಾಲ್ಕು ಓವರ್ ಬೌಲಿಂಗ್ ಮಾಡಿದ ಬಳಿಕ ಸ್ಲಿಪ್ ಫೀಲ್ಡಿಂಗ್ಗೆ ತೆರಳಿದ್ದ ಅವರು ಏಕಾಏಕಿ ಅಸ್ವಸ್ಥತೆಯನ್ನು ಅನುಭವಿಸಿದ್ದಾರೆ ಎಂದು ವರದಿಯಾಗಿದೆ.
ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಕ್ಷಯ್ ಅವರು ಸಹ ಆಟಗಾರರಿಗೆ ಎದೆನೋವು ಮತ್ತು ಉಸಿರಾಟದ ತೊಂದರೆ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ. ನಂತರ ಮೈದಾನದಿಂದ ಹೊರಬಂದು ಪೆವಿಲಿಯನ್ ಸಮೀಪ ವಿಶ್ರಾಂತಿ ಪಡೆಯಲು ಕುಳಿತಿದ್ದರು. ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದಿದ್ದು, ಮೈದಾನದಲ್ಲಿದ್ದ ಆಟಗಾರರು ಮತ್ತು ಅಧಿಕಾರಿಗಳು ಆತಂಕಕ್ಕೀಡಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಶಿವಮೊಗ್ಗ ಮೂಲದ ಅಕ್ಷಯ್ ಅವರು ಕರ್ನಾಟಕ ಕ್ರಿಕೆಟ್ನಲ್ಲಿ ಪ್ರತಿಭಾವಂತ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಅವರು ಕರ್ನಾಟಕ ಪರ ಆರು ಪ್ರಥಮ ದರ್ಜೆ ಪಂದ್ಯಗಳು, ಮೂರು ಲಿಸ್ಟ್-ಎ ಪಂದ್ಯಗಳು ಹಾಗೂ ಒಂಬತ್ತು ಟಿ20 ಪಂದ್ಯಗಳನ್ನು ಆಡಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿಯೂ ಅವರು ಭಾಗವಹಿಸಿದ್ದರು. ಕ್ರಿಕೆಟ್ ಆಟಗಾರರಾಗಿ ಮಾತ್ರವಲ್ಲದೆ, ಕರ್ನಾಟಕ ಅಂಡರ್-19 ತಂಡದ ಕೋಚ್ ಆಗಿಯೂ ಸೇವೆ ಸಲ್ಲಿಸಿ ಅನೇಕ ಯುವ ಪ್ರತಿಭೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಅಕ್ಷಯ್ ಅವರ ನಿಧನಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ (KSCA) ಸಂತಾಪ ಸೂಚಿಸಿದೆ. “ಅವರು ಕರ್ನಾಟಕ ಕ್ರಿಕೆಟ್ಗೆ ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಯುವ ಆಟಗಾರರನ್ನು ಬೆಳೆಸುವಲ್ಲಿ ಅವರ ಕೊಡುಗೆ ಅಪಾರ” ಎಂದು ಪ್ರಕಟಣೆಯಲ್ಲಿ ಹೇಳಿದೆ.
ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ ಕರ್ನಾಟಕದ ಮಾಜಿ ಆಟಗಾರ Dodda Ganesh ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂತಾಪ ಸೂಚಿಸಿ, “ಕ್ರಿಕೆಟ್ ಸಮುದಾಯಕ್ಕೆ ಇದು ಭಾರೀ ದುಃಖದ ಸುದ್ದಿ. ಅಕ್ಷಯ್ ತುಂಬಾ ಸರಳ ಮತ್ತು ಮೃದುಸ್ವಭಾವದ ವ್ಯಕ್ತಿ. ಅವರ ಅಗಲಿಕೆ ನಂಬಲಾರದ ಸಂಗತಿ” ಎಂದು ಬರೆದಿದ್ದಾರೆ.

