ಮೈಸೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಸೂಪರ್ ಹಿಟ್ 'ಕಾಂತಾರ' ಸಿನಿಮಾದ ದೈವಾರಾಧನೆ ದೃಶ್ಯವನ್ನು ಅಪಹಾಸ್ಯ ಮಾಡಿ ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್, ಇದೀಗ ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ಬೆಟ್ಟಕ್ಕೆ ಯಾರಿಗೂ ತಿಳಿಯದಂತೆ ಗುಪ್ತವಾಗಿ ಭೇಟಿ ನೀಡಿದ್ದಾರೆ. ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಚಿತ್ರದ ಚಾವುಂಡಿ ದೈವದ ದೃಶ್ಯವನ್ನು ಅಣಕಿಸುವ ಮೂಲಕ ವಿವಾದ ಸೃಷ್ಟಿಸಿದ್ದ ಅವರು, ಈಗ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ತಲೆಬಾಗಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.
ಕೆಲ ದಿನಗಳ ಹಿಂದೆ ಗೋವಾದಲ್ಲಿ ನಡೆದ ಫಿಲ್ಮೋತ್ಸವ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಅವರ ಸಮ್ಮುಖದಲ್ಲೇ ಮಾತನಾಡಿದ್ದ ರಣವೀರ್ ಸಿಂಗ್, "ನಾನು ಕಾಂತಾರ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದೆ, ನಿಮ್ಮ ನಟನೆ ಅದ್ಭುತವಾಗಿತ್ತು. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಮೇಲೆ ಬರುವ ದೃಶ್ಯವಂತೂ ಅತ್ಯದ್ಭುತ. ಆ ದೃಶ್ಯದಲ್ಲಿನ ನಿಮ್ಮ ನಟನೆ ಮತ್ತು ನೋಟ ತುಂಬಾ ಮಜವಾಗಿತ್ತು" ಎಂದು ಹೇಳುತ್ತಾ ದೈವದ ಕೂಗನ್ನು ಅನುಕರಣೆ ಮಾಡಿ ವಿಕಾರವಾಗಿ ನಟಿಸಿದ್ದರು. ಕರಾವಳಿಯ ಶ್ರದ್ಧೆ ಹಾಗೂ ಪವಿತ್ರ ದೈವಾರಾಧನೆಯನ್ನು 'ಹೊರಗಿನ ಹೆಣ್ಣು ದೆವ್ವ' ಎಂದು ಕರೆದು, ಅದನ್ನು ಹಾಸ್ಯದ ವಸ್ತುವಾಗಿಸಿಕೊಂಡ ರಣವೀರ್ ವರ್ತನೆಗೆ ದೈವಾರಾಧಕರು ಹಾಗೂ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಈ ಸಂವೇದನಾ ರಹಿತ ವರ್ತನೆಯ ವಿರುದ್ಧ ದೈವಾರಾಧಕರು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಪ್ರಕರಣದ ವಿಚಾರಣೆ ಹೈಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ಕಲಾಪದ ವೇಳೆ ತಮಗೆ ಎದುರಾಗಬಹುದಾದ ಕಾನೂನು ಸಂಕಷ್ಟವನ್ನು ಅರಿತ ರಣವೀರ್ ಸಿಂಗ್, ತಕ್ಷಣವೇ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದರು. ಅಲ್ಲದೆ, ಶೀಘ್ರದಲ್ಲೇ ಕರ್ನಾಟಕದ ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಖುದ್ದಾಗಿ ಭೇಟಿ ನೀಡಿ ತಾಯಿಯ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಾಗಿ ನ್ಯಾಯಾಲಯ ಮತ್ತು ಸಾರ್ವಜನಿಕರಿಗೆ ಭರವಸೆ ನೀಡಿದ್ದರು
ಅದರಂತೆ ಸದ್ದಿಲ್ಲದೆ ಮೈಸೂರಿಗೆ ಆಗಮಿಸಿರುವ ಬಾಲಿವುಡ್ ನಟ, ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಯ ದರ್ಶನ ಪಡೆದಿದ್ದಾರೆ. ಸಾರ್ವಜನಿಕರು ಹಾಗೂ ಮಾಧ್ಯಮಗಳ ಕಣ್ಣಿಗೆ ಬೀಳದಂತೆ ಕಟ್ಟುನಿಟ್ಟಿನ ಗೌಪ್ಯತೆ ಕಾಯ್ದುಕೊಂಡಿದ್ದ ರಣವೀರ್ ಸಿಂಗ್, ಗರ್ಭಗುಡಿಯ ಮುಂದೆ ಕುಳಿತು ಅತ್ಯಂತ ಭಕ್ತಿ ಮತ್ತು ಪಶ್ಚಾತ್ತಾಪದಿಂದ ತಲೆಬಾಗಿ ದೇವಿಯ ಎದುರು ಕ್ಷಮೆ ಯಾಚಿಸಿದ್ದಾರೆ. ಸದ್ಯ ರಣವೀರ್ ಸಿಂಗ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಕೆಲವು ಆಯ್ದ ದೃಶ್ಯಗಳು ಲಭ್ಯವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಭೇಟಿಯ ಮೂಲಕ ಇಡೀ ವಿವಾದಕ್ಕೆ ಪೂರ್ಣವಿರಾಮ ಇಡಲು ನಟ ಪ್ರಯತ್ನಿಸಿದ್ದಾರೆ.

