ಭಾರಿ ಮಳೆಗೆ ಬೃಹತ್ ಕ್ರೇನ್ ಧರಾಶಾಹಿ: ಕೂದಲೆಳೆ ಅಂತರದಲ್ಲಿ ಕಾರ್ಮಿಕರು ಪಾರು

KARNATAKA NEWS LIVE
By -
0

 

raichur-heavy-rain-crane-collapse-maski

ರಾಯಚೂರು: ದಿಢೀರ್ ಹವಾಮಾನ ವೈಪರೀತ್ಯ ಹಾಗೂ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮೆದಿಕಿನಾಳ ತಾಂಡಾ ಸಮೀಪ ಭಾರೀ ಅವಘಡ ಸಂಭವಿಸಿದ್ದು, ಗಾಳಿ ವಿದ್ಯುತ್ ಟವರ್ ಅಳವಡಿಕೆ ಕಾಮಗಾರಿಯಲ್ಲಿ ತೊಡಗಿದ್ದ ಬೃಹತ್ ಕ್ರೇನ್ ನಿಯಂತ್ರಣ ತಪ್ಪಿ ಧರೆಗುರುಳಿದ ಘಟನೆ ನಡೆದಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲಕಾಲ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿತ್ತು.


ಮಸ್ಕಿ ತಾಲೂಕಿನ ಮೆದಿಕಿನಾಳ ತಾಂಡಾ ವ್ಯಾಪ್ತಿಯ ರೈತರ ಜಮೀನಿನಲ್ಲಿ ವಿಂಡ್ ಪವರ್ ಯೋಜನೆಯಡಿ ಗಾಳಿ ವಿದ್ಯುತ್ ಟವರ್ ಅಳವಡಿಸುವ ಕಾಮಗಾರಿ ಭರದಿಂದ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಹವಾಮಾನದಲ್ಲಿ ತೀವ್ರ ಬದಲಾವಣೆ ಉಂಟಾಗಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯತೊಡಗಿದೆ. ಗಾಳಿಯ ವೇಗ ಹೆಚ್ಚಾದ ಪರಿಣಾಮ ಕಾಮಗಾರಿಯಲ್ಲಿ ಬಳಸಲಾಗುತ್ತಿದ್ದ ದೈತ್ಯಾಕಾರದ ಕ್ರೇನ್ ಪ್ರೆಶರ್ ತಡೆಯಲಾಗದೆ ಏಕಾಏಕಿ ನಿಯಂತ್ರಣ ತಪ್ಪಿ ನೆಲಕ್ಕುರುಳಿದೆ.


ಭಾರೀ ಗಾತ್ರದ ಕ್ರೇನ್ ನೆಲಕ್ಕೆ ಬಿದ್ದ ರಭಸಕ್ಕೆ ಕಾಮಗಾರಿ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಎರಡು ಲಾರಿಗಳ ಮುಂಭಾಗದ ಗಾಜುಗಳು ಸಂಪೂರ್ಣ ಪುಡಿಪುಡಿಯಾಗಿವೆ. ಜೊತೆಗೆ ಕ್ರೇನ್ ಕೂಡ ಭಾರೀ ಪ್ರಮಾಣದಲ್ಲಿ ಜಖಂಗೊಂಡಿದೆ. ಅವಘಡ ಸಂಭವಿಸಿದ ವೇಳೆ ಸ್ಥಳದಲ್ಲೇ ಹಲವು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಕ್ರೇನ್ ಕುಸಿಯುತ್ತಿರುವುದನ್ನು ಗಮನಿಸಿದ ಕೆಲವರು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಓಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.


ಘಟನೆಯಲ್ಲಿ ಕೆಲ ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಜೀವಹಾನಿ ಸಂಭವಿಸದೇ ಇರುವುದು ಎಲ್ಲರಿಗೂ ನಿಟ್ಟುಸಿರು ಬಿಡುವಂತಾಗಿದೆ. ಸ್ಥಳದಲ್ಲಿದ್ದ ಕಾರ್ಮಿಕರು ಹಾಗೂ ಸ್ಥಳೀಯರು ಕೆಲಕಾಲ ಭಯಭೀತರಾಗಿ ಓಡಾಡಿದ ದೃಶ್ಯಗಳು ಕಂಡುಬಂದವು. ದಿಢೀರ್ ಸಂಭವಿಸಿದ ಈ ಅವಘಡದಿಂದ ಕಾಮಗಾರಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಭಾರಿ ಗಾಳಿ ಮತ್ತು ಮಳೆಯಿಂದ ಉಂಟಾದ ಈ ಅವಘಡ ಇದೀಗ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

Tags:

Post a Comment

0 Comments

Post a Comment (0)
3/related/default