ಪುತ್ತೂರು: ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ದೂರವಾಣಿ ಕರೆ ಮಾಡಿ ಕಲಾವಿದರಿಗೆ ಅವಹೇಳನಕಾರಿ ಮಾತುಗಳನ್ನಾಡಿ, ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕಲಾವಿದ ಸುಂದರ್ ರೈ ಮಂದರ ಅವರು ನೀಡಿರುವ ದೂರಿನ ಪ್ರಕಾರ, ಎಪ್ರಿಲ್ 21 ರಂದು ಸತೀಶ್ ಕುಮಾರ್ ರೈ ಪಡುಮಲೆ ಎಂಬವರು ಕರೆ ಮಾಡಿ ತಿಮರೋಡಿ ವಿರುದ್ಧ ದಾಖಲಿಸಿರುವ ಪ್ರಕರಣದ ವಿಚಾರವಾಗಿ ಒತ್ತಡ ಹೇರಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. “ಮುಂಬಯಿಯಲ್ಲಿ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ” ಎಂದು ಹೆದರಿಕೆ ಹಾಕಿದ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಾದ ಬಳಿಕ ಎಪ್ರಿಲ್ 29 ರಂದು ಸಾಮಾಜಿಕ ಜಾಲತಾಣಗಳಲ್ಲಿ ಕಲಾವಿದರ ವಿರುದ್ಧ ಅವಹೇಳನಕಾರಿ ಬರಹಗಳನ್ನು ಹಾಕಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ “ಕುಡ್ಲ ರಾಂಪೇಜ್” ಯೂಟ್ಯೂಬ್ ಚಾನಲ್ ಮೂಲಕ ಪ್ರಸನ್ನ ರವಿ ಮತ್ತು ಇತರರು ಸಹ ಕಲಾವಿದರ ವಿರುದ್ಧ ನಿಂದನಾತ್ಮಕ ಹಾಗೂ ಮಾನಹಾನಿಕರ ರೀತಿಯಲ್ಲಿ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರ ಜೊತೆಗೆ ತಿಮರೋಡಿ ವಿರುದ್ಧ ನೀಡಿರುವ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಲಾಗಿದ್ದು, ತಿಮರೋಡಿ ಪರವಾಗಿ ಸುಳ್ಳು ಸಾಕ್ಷಿ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಸುಂದರ್ ರೈ ಮಂದರ ಅವರು ಮೇ 7 ರಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ದುರುಪಯೋಗ ಹಾಗೂ ಕಲಾವಿದರ ವಿರುದ್ಧ ನಡೆಯುತ್ತಿರುವ ಅವಹೇಳನಕಾರಿ ಪ್ರಚಾರದ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಹೊರಬೀಳುವ ಸಾಧ್ಯತೆ ಇದೆ.
ಪುತ್ತೂರು ಸುದ್ದಿ, ಸುಂದರ್ ರೈ ಮಂದರ, ಕಲಾವಿದರಿಗೆ ಬೆದರಿಕೆ, ಸಾಮಾಜಿಕ ಜಾಲತಾಣ ಅವಹೇಳನ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ, ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನಲ್, ತಿಮರೋಡಿ ಪ್ರಕರಣ, ಕನ್ನಡ ಸುದ್ದಿ
