ಮಂಗಳೂರಿನಲ್ಲಿ ಲಿಫ್ಟ್‌ನಲ್ಲಿ ಸಿಲುಕಿ ಯುವಕ ದಾರುಣ ಸಾವು

KARNATAKA NEWS LIVE
By -
0

 


ಮಂಗಳೂರು: ನಗರದ ಕುಂಟಿಕಾನ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಆನ್‌ಲೈನ್ ಡೆಲಿವರಿ ಸಂಸ್ಥೆಯೊಂದರ ಕಟ್ಟಡದಲ್ಲಿ ಭೀಕರ ಲಿಫ್ಟ್ ದುರಂತ ಸಂಭವಿಸಿದ್ದು, ಲಿಫ್ಟ್‌ನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಈ ಘಟನೆ ನಗರದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದ್ದು, ಕಟ್ಟಡಗಳಲ್ಲಿನ ಲಿಫ್ಟ್ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ.


ಮೃತ ಯುವಕನನ್ನು ಬೆಳ್ತಂಗಡಿ ತಾಲೂಕಿನ ಬೆಳಾಲು ಪೂಂಜಕೆರೆ ನಿವಾಸಿ ನೌಫಾಲ್ (28) ಎಂದು ಗುರುತಿಸಲಾಗಿದೆ. ಅವರು ಆನ್‌ಲೈನ್ ಡೆಲಿವರಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಾರ್ಯನಿಮಿತ್ತ ಕಟ್ಟಡದ ಮೇಲ್ಮಹಡಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.


ಮಾಹಿತಿಯ ಪ್ರಕಾರ, ನೌಫಾಲ್ ಅವರು ಲಿಫ್ಟ್ ಮೂಲಕ ಮೇಲ್ಮಹಡಿಗೆ ತೆರಳುತ್ತಿದ್ದಾಗ ಏಕಾಏಕಿ ಲಿಫ್ಟ್ ತಾಂತ್ರಿಕ ದೋಷದಿಂದ ಒಂದನೇ ಮಹಡಿ ಹಾಗೂ ನೆಲಮಹಡಿ ಮಧ್ಯಭಾಗದಲ್ಲಿ ನಿಂತು ಹೋಗಿದೆ. ಲಿಫ್ಟ್ ಒಳಗೆ ಸಿಲುಕಿಕೊಂಡಿದ್ದ ನೌಫಾಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಈ ವಿಷಯ ತಿಳಿದ ತಕ್ಷಣ ಅಲ್ಲಿದ್ದ ಸಹೋದ್ಯೋಗಿಗಳು ಹಾಗೂ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ.


ಲಿಫ್ಟ್‌ನ ಅರ್ಧಭಾಗ ಒಂದನೇ ಮಹಡಿಗೆ ಸಮೀಪದಲ್ಲಿದ್ದ ಕಾರಣ, ಸಿಬ್ಬಂದಿ ಬಲವಂತವಾಗಿ ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಬಳಿಕ ಒಳಗಿದ್ದ ನೌಫಾಲ್ ಅವರನ್ನು ಕೈ ಹಿಡಿದು ಮೇಲಕ್ಕೆ ಎಳೆಯುವ ಕಾರ್ಯ ಆರಂಭಿಸಲಾಯಿತು. ಆದರೆ ಇದೇ ವೇಳೆ ಏಕಾಏಕಿ ಲಿಫ್ಟ್ ಮರುಚಲನೆಗೊಂಡಿದ್ದು, ನೌಫಾಲ್ ಗಂಭೀರವಾಗಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಘಟನೆಯ ತೀವ್ರತೆಗೆ ನೌಫಾಲ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ದಾರುಣ ಘಟನೆ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ಆಘಾತ ಮೂಡಿಸಿದೆ.


ಘಟನಾ ಸ್ಥಳಕ್ಕೆ ಉರ್ವ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಿಫ್ಟ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದೇ ಅಥವಾ ಸುರಕ್ಷತಾ ಕ್ರಮಗಳಲ್ಲಿ ನಿರ್ಲಕ್ಷ್ಯವಿತ್ತೇ ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ. ಕಟ್ಟಡದ ನಿರ್ವಹಣಾ ಸಂಸ್ಥೆ ಹಾಗೂ ಲಿಫ್ಟ್ ತಾಂತ್ರಿಕ ಸಿಬ್ಬಂದಿಯಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.



Tags:

Post a Comment

0 Comments

Post a Comment (0)
3/related/default