ಮಂಗಳೂರು: ಹೊಯ್ಸಳ ಪೊಲೀಸರ ಮೇಲೆ ಹಲ್ಲೆ: ಪೊಲೀಸ್ ಸಿಬ್ಬಂದಿಯ ಕೈಮಣಿ ಮೂಳೆ ಮುರಿತ, ಮೂವರು ಆರೋಪಿಗಳ ವಿರುದ್ಧ ಪ್ರಕರಣ

KARNATAKA NEWS LIVE
By -
0

 

mangaluru-hoysala-police-assault-konchady-junction-case

ಮಂಗಳೂರು: ಕರ್ತವ್ಯ ನಿರತ ಹೊಯ್ಸಳ ಪೊಲೀಸ್ ಸಿಬ್ಬಂದಿಯ ಮೇಲೆ ಮೂವರು ಯುವಕರು ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಮಂಗಳೂರು ನಗರದ ದೆರೆಬೈಲ್ ಗ್ರಾಮದ ಕೊಂಚಾಡಿ ಜಂಕ್ಷನ್‌ನಲ್ಲಿ ನಡೆದಿದ್ದು, ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೈಮಣಿಯ ಮೂಳೆ ಮುರಿದಿರುವ ಘಟನೆ ಭಾರೀ ಆತಂಕಕ್ಕೆ ಕಾರಣವಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೇ 17ರಂದು ರಾತ್ರಿ ಕೊಂಚಾಡಿ ಜಂಕ್ಷನ್‌ನಲ್ಲಿರುವ ಬಾರ್ ಮತ್ತು ರೆಸ್ಟೊರೆಂಟ್‌ನಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಹೊಯ್ಸಳ ನಿಯಂತ್ರಣ ಕೊಠಡಿಗೆ ದೂರು ಕರೆ ಬಂದಿತ್ತು. ಮಾಹಿತಿ ಪಡೆದ ತಕ್ಷಣ ಹೊಯ್ಸಳ ಸಿಬ್ಬಂದಿಯಾದ ಸಿಪಿಸಿ ಅಪ್ಪಣ್ಣ ಶೇಡಬಾಳ ಹಾಗೂ ಎಎಚ್‌ಸಿ ಭೀಮಾಶಂಕರ್ ಅವರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದರು. ಈ ವೇಳೆ ಬಾರ್‌ನಿಂದ ಹೊರಬಂದಿದ್ದ ಪ್ರಸಾದ್, ಉದಯ ಮತ್ತು ಪ್ರಶಾಂತ್ ಎಂಬ ಮೂವರು ಆರೋಪಿಗಳನ್ನು ಅಲ್ಲಿನ ಸೆಕ್ಯೂರಿಟಿ ಸಿಬ್ಬಂದಿ ಪೊಲೀಸರಿಗೆ ಗುರುತಿಸಿಕೊಟ್ಟಿದ್ದರು.


ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಲು ಮುಂದಾದಾಗ ಮೂವರು ಕೂಡ ಉಡಾಫೆ ಉತ್ತರ ನೀಡಿದ್ದು, ಬಳಿಕ ಪಕ್ಕದಲ್ಲಿದ್ದ ಪಾನ್ ಶಾಪ್ ಬಳಿ ತೆರಳಿದ ಆರೋಪಿ ಪ್ರಸಾದ್ ಸಾರ್ವಜನಿಕ ಸ್ಥಳದಲ್ಲೇ ಸಿಗರೇಟ್ ಸೇದಲು ಆರಂಭಿಸಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಬಾರದು ಎಂದು ಪೊಲೀಸರು ಎಚ್ಚರಿಸಿ ಸಿಗರೇಟ್ ಬಿಸಾಡುವಂತೆ ಸೂಚಿಸಿದಾಗ, “ನಾವು ದುಡ್ಡು ಕೊಟ್ಟು ಸೇದುತ್ತಿದ್ದೇವೆ, ಕೇಳಲು ನೀನ್ಯಾರು?” ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ.


ಅಷ್ಟೇ ಅಲ್ಲದೆ, ಆರೋಪಿ ಪ್ರಸಾದ್ ತನ್ನ ಮೊಬೈಲ್‌ನಲ್ಲಿ ಪೊಲೀಸರ ವಿಡಿಯೋ ಚಿತ್ರೀಕರಣ ಮಾಡಲು ಆರಂಭಿಸಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ತಾವೂ ಸಹ ಮೊಬೈಲ್ ಆನ್ ಮಾಡಿಕೊಂಡಾಗ ಉಳಿದ ಇಬ್ಬರು ಆರೋಪಿಗಳಾದ ಉದಯ ಮತ್ತು ಪ್ರಶಾಂತ್ ಮಧ್ಯೆ ಪ್ರವೇಶಿಸಿ ಪೊಲೀಸರನ್ನು ತಡೆದಿದ್ದಾರೆ. “ನಾವು ಇಲ್ಲಿಂದ ಹೋಗುವುದಿಲ್ಲ, ನೀವೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ” ಎಂದು ದರ್ಪದಿಂದ ಮಾತನಾಡಿ ಕರ್ತವ್ಯ ನಿರತ ಪೊಲೀಸರ ಕಾರ್ಯಕ್ಕೆ ಅಡ್ಡಿಪಡಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಪರಿಸ್ಥಿತಿ ತೀವ್ರವಾಗುತ್ತಿದ್ದಂತೆಯೇ ಆರೋಪಿ ಪ್ರಸಾದ್ ಪೊಲೀಸ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, “ಬೇವರ್ಸಿಗಳು” ಎಂದು ಬೈದು ಸಿಪಿಸಿ ಅಪ್ಪಣ್ಣ ಅವರನ್ನು ಬಲವಾಗಿ ತಳ್ಳಿದ್ದಾನೆ. ಪರಿಣಾಮವಾಗಿ ಅವರು ನೆಲಕ್ಕೆ ಬಿದ್ದು ಎಡಗೈನ ಮಣಿಗಂಟಿಗೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಕೈಮಣಿಯ ಮೂಳೆ ಮುರಿದಿರುವುದು ದೃಢಪಟ್ಟಿದೆ. ಗಾಯ ಗಂಭೀರವಾಗಿರುವುದರಿಂದ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.


ಘಟನೆ ಸಂಬಂಧ ಪ್ರಸಾದ್, ಉದಯ ಮತ್ತು ಪ್ರಶಾಂತ್ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Tags:

Post a Comment

0 Comments

Post a Comment (0)
3/related/default