ಉಡುಪಿ/ ಮಂಗಳೂರು: ಖಾಸಗಿ ಬಸ್ ದರ ಏರಿಕೆ ಭೀತಿ: ಒಂದು ತಿಂಗಳಲ್ಲಿ ಅಂತಿಮ ನಿರ್ಧಾರ, ಖಾಸಗಿ ಬಸ್ ಸಂಘ ಸ್ಪಷ್ಟನೆ

suddilive.com
By -
0

 


ಮಂಗಳೂರು, ಮೇ 23: ಡೀಸೆಲ್ ಬೆಲೆ ನಿರಂತರ ಏರಿಕೆ, ಸ್ಪೇರ್ ಪಾರ್ಟ್ಸ್ ದುಬಾರಿ, ವಾಹನ ತೆರಿಗೆ ಹೆಚ್ಚಳ ಹಾಗೂ ವಿಮಾ ಪ್ರೀಮಿಯಂ ಏರಿಕೆಯ ಹೊರೆ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಪ್ರಯಾಣ ದರ ಏರಿಕೆಯ ಭೀತಿ ಎದುರಾಗಿದೆ. ಖಾಸಗಿ ಬಸ್ ಸೇವೆಗಳನ್ನು ನಿರ್ವಹಿಸುವುದು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದ್ದು, ದರ ಪರಿಷ್ಕರಣೆ “ಅನಿವಾರ್ಯ” ಎಂಬ ಸ್ಥಿತಿಗೆ ತಲುಪಿದೆ ಎಂದು ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ. ಆದರೆ ತಕ್ಷಣವೇ ಬಸ್ ದರ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿರುವ ಸಂಘ, ಮುಂದಿನ ಒಂದು ತಿಂಗಳ ಕಾಲ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದೆ.


ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಜೀಜ್ ಪಾರ್ತಿಪ್ಪಾಡಿ, ಕಳೆದ ಐದು ವರ್ಷಗಳಿಂದ ಖಾಸಗಿ ಬಸ್ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಹೇಳಿದರು. ಆದರೆ ಈ ಅವಧಿಯಲ್ಲಿ ಡೀಸೆಲ್ ಬೆಲೆ, ವಾಹನ ನಿರ್ವಹಣಾ ವೆಚ್ಚ, ಟೈರ್ ಮತ್ತು ಸ್ಪೇರ್ ಪಾರ್ಟ್ಸ್ ದರ, ಕಾರ್ಮಿಕ ವೆಚ್ಚ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಭಾರೀ ಏರಿಕೆ ಕಂಡುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಈಗಿನ ದರದಲ್ಲೇ ಬಸ್ ಸೇವೆ ಮುಂದುವರಿಸುವುದು ಮಾಲೀಕರಿಗೆ ದೊಡ್ಡ ಆರ್ಥಿಕ ಒತ್ತಡವಾಗುತ್ತಿದೆ ಎಂದು ಅವರು ತಿಳಿಸಿದರು.


ಮುಂದಿನ ಒಂದು ತಿಂಗಳ ಕಾಲ ಡೀಸೆಲ್ ಬೆಲೆಯ ಚಲನೆ, ಕಾರ್ಯಾಚರಣಾ ವೆಚ್ಚದ ಏರಿಳಿತ ಮತ್ತು ಒಟ್ಟಾರೆ ಆರ್ಥಿಕ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು. ಈ ಅಧ್ಯಯನದ ಬಳಿಕವೇ ಬಸ್ ದರ ಪರಿಷ್ಕರಣೆ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರಿಗೆ ಯಾವುದೇ ಅನಾನುಕೂಲವಾಗದಂತೆ ಹಾಗೂ ಪರಿಸ್ಥಿತಿಯನ್ನು ಸಮತೋಲನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದಾಗಿ ಸಂಘ ಭರವಸೆ ನೀಡಿದೆ.


ಇದೇ ವೇಳೆ ಮುಂಗಾರು ಆರಂಭವಾಗುತ್ತಿರುವುದು ಹಾಗೂ ಶಾಲಾ-ಕಾಲೇಜುಗಳು ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ನಿರ್ವಹಣೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಮಹಿಳಾ ಪ್ರಯಾಣಿಕರೊಂದಿಗೆ ಚಾಲಕರು ಮತ್ತು ನಿರ್ವಾಹಕರು ಸೌಜನ್ಯದಿಂದ ವರ್ತಿಸಬೇಕು ಎಂದು ಸೂಚಿಸಲಾಗುವುದು ಎಂದರು. ಭಾರೀ ಮಳೆಯ ಸಂದರ್ಭದಲ್ಲಿಯೂ ಸುರಕ್ಷಿತ ಚಾಲನೆ, ಸಮಯಪಾಲನೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ಸೇವೆ ನೀಡುವಂತೆ ಬಸ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಹೇಳಿದರು.


ನಗರದ ವಿವಿಧ ಜಂಕ್ಷನ್‌ಗಳಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಖಾಸಗಿ ಬಸ್ ಸಂಚಾರ ಮತ್ತು ಸಮಯಪಾಲನೆಗೆ ದೊಡ್ಡ ಸಮಸ್ಯೆಯಾಗುತ್ತಿದೆ ಎಂದು ಸಂಘ ಕಳವಳ ವ್ಯಕ್ತಪಡಿಸಿದೆ. ವಿಶೇಷವಾಗಿ ಬಿಜೈ ಕೆಎಸ್‌ಆರ್‌ಟಿಸಿ ಜಂಕ್ಷನ್‌ನಲ್ಲಿ ಮಳೆಯ ಸಮಯದಲ್ಲಿ ನೀರು ನಿಂತುಕೊಳ್ಳುವ ಸಮಸ್ಯೆಯಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಂಘ ಒತ್ತಾಯಿಸಿದೆ.


ಇದಲ್ಲದೆ ಕೆಪಿಟಿ-ನಂತೂರು ಜಂಕ್ಷನ್‌ನಲ್ಲಿ ನಿರಂತರ ಟ್ರಾಫಿಕ್ ದಟ್ಟಣೆಯಿಂದ ಬಸ್ ವೇಳಾಪಟ್ಟಿಗಳು ಅಸ್ತವ್ಯಸ್ತವಾಗುತ್ತಿವೆ ಎಂದು ಸಂಘ ತಿಳಿಸಿದೆ. ಕುಂಟಿಕಾನ ಜಂಕ್ಷನ್, ಲಾಲ್‌ಬಾಗ್ ಜಂಕ್ಷನ್, ಪಿವಿಎಸ್ ಜಂಕ್ಷನ್ ಹಾಗೂ ಬಂಟ್ಸ್ ಹಾಸ್ಟೆಲ್ ಜಂಕ್ಷನ್‌ಗಳಲ್ಲಿಯೂ ಇದೇ ರೀತಿಯ ವಾಹನ ದಟ್ಟಣೆ ಕಂಡುಬರುತ್ತಿದ್ದು, ಇದರಿಂದ ನಗರಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆ ವಿಳಂಬವಾಗುತ್ತಿದೆ ಎಂದು ದೂರಿದೆ.


ಸಾರ್ವಜನಿಕ ಸಾರಿಗೆ ಕೇಂದ್ರಗಳಲ್ಲಿ ಸುರಕ್ಷತಾ ಸಮಸ್ಯೆಯೂ ಹೆಚ್ಚುತ್ತಿರುವ ಬಗ್ಗೆ ಸಂಘ ಗಂಭೀರ ಆತಂಕ ವ್ಯಕ್ತಪಡಿಸಿದೆ. ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಸುತ್ತಮುತ್ತ ಸಂಜೆ ವೇಳೆಯ ನಂತರ ಸಮಾಜಘಾತುಕ ಚಟುವಟಿಕೆಗಳು ಹೆಚ್ಚುತ್ತಿರುವುದಾಗಿ ಆರೋಪಿಸಿದೆ. ರಾತ್ರಿ ವೇಳೆ ಬಸ್‌ಗಾಗಿ ಕಾಯುವ ಮಹಿಳಾ ಪ್ರಯಾಣಿಕರು ಸುರಕ್ಷತಾ ಸಮಸ್ಯೆ ಎದುರಿಸುತ್ತಿದ್ದು, ಜನಸಂದಣಿ ಹೆಚ್ಚಿರುವ ಈ ಪ್ರದೇಶದಲ್ಲಿ ಪ್ರತ್ಯೇಕ ಪೊಲೀಸ್ ಔಟ್‌ಪೋಸ್ಟ್ ಸ್ಥಾಪನೆ ಅಗತ್ಯವಿದೆ ಎಂದು ಸಂಘ ಆಗ್ರಹಿಸಿದೆ.


ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ. ರಾಮಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲ್ಲರ್ ಹಾಗೂ ಖಜಾಂಚಿ ಜೋಯೆಲ್ ದಿಲ್ ರಾಜ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

Tags:

Post a Comment

0 Comments

Post a Comment (0)
3/related/default