ಕೊಲ್ಲೂರು ಬಳಿ ಭೀಕರ ಅಪಘಾತ: ಟೆಂಪೋ-ಜೀಪು ಡಿಕ್ಕಿಗೆ ಕೇರಳದ ಇಬ್ಬರು ಸಾವು, ಎಂಟು ಮಂದಿಗೆ ಗಂಭೀರ ಗಾಯ

KARNATAKA NEWS LIVE
By -
0

 

kollur-tempo-jeep-accident-kerala-tourists-death-kundapura

ಕುಂದಾಪುರ, ಮೇ ೧೭: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ದಳಿ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕೊಡಚಾದ್ರಿ ಪ್ರವಾಸ ಮುಗಿಸಿ ಕೊಲ್ಲೂರಿನತ್ತ ಮರಳುತ್ತಿದ್ದ ಜೀಪು ಹಾಗೂ ಎದುರಿನಿಂದ ಬರುತ್ತಿದ್ದ ಇನ್ಸುಲೇಟರ್ ಸಾಗಣೆ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.


ಮೃತರನ್ನು ಕೇರಳ ರಾಜ್ಯದ ಜ್ಯೋತಿ (೩೫) ಮತ್ತು ಆರ್ಯ ಅನೂಪ್ (೨೮) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾದರು.


ಅಪಘಾತದಲ್ಲಿ ಅಯನ್ (೫), ಅವನಿ (೮), ಅರ್ಜುನ್ (೯), ಮಿನಿ (೬೦), ಅಭಿ (೩೬), ಅನೂಪ್ (೩೭), ಜ್ಯೋತಿಷ್ (೪೩) ಹಾಗೂ ಜೀಪು ಚಾಲಕ ದೇವರಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯರ ಸಹಾಯದಿಂದ ಕುಂದಾಪುರ ಹಾಗೂ ಮಣಿಪಾಲದ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.


ಮಾಹಿತಿಯ ಪ್ರಕಾರ, ಕೇರಳದಿಂದ ಬಂದಿದ್ದ ಪ್ರವಾಸಿಗರ ತಂಡ ಕೊಡಚಾದ್ರಿಗೆ ಭೇಟಿ ನೀಡಿ ಬಳಿಕ ಕೊಲ್ಲೂರಿನತ್ತ ಜೀಪಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಕೊಲ್ಲೂರು ಕಡೆಯಿಂದ ನಾಗೋಡಿ ಕಡೆಗೆ ಸಾಗುತ್ತಿದ್ದ ಇನ್ಸುಲೇಟರ್ ಸಾಗಣೆ ವಾಹನದೊಂದಿಗೆ ದಳಿ ಪ್ರದೇಶದಲ್ಲಿ ಜೀಪು ಡಿಕ್ಕಿ ಹೊಡೆದಿದೆ. ರಸ್ತೆ ತಿರುವು ಹಾಗೂ ವೇಗವೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.


ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕೊಲ್ಲೂರು ಪೊಲೀಸ್ ಠಾಣೆಯ ಪಿಎಸ್‌ಐ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಭೀಮಾ ಶಂಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದ್ದು, ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.



Tags:

Post a Comment

0 Comments

Post a Comment (0)
3/related/default