ಬಾಗಲಕೋಟೆ: ನಾಯಿ ಕಚ್ಚಿದ ಬಳಿಕ ಅದನ್ನು ಸಾಮಾನ್ಯ ಗಾಯವೆಂದು ನಿರ್ಲಕ್ಷಿಸಿದ ಪರಿಣಾಮ ಯುವಕನೊಬ್ಬ ರೇಬಿಸ್ ಸೋಂಕಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಸಮಯಕ್ಕೆ ಸರಿಯಾಗಿ ರೇಬಿಸ್ ವಿರೋಧಿ ಲಸಿಕೆ ಪಡೆಯದಿದ್ದೇ ಈ ದುರ್ಘಟನೆಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ಯುವಕನನ್ನು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೋಲಸಂಗಿ ಗ್ರಾಮದ ನಿವಾಸಿ ಪ್ರದೀಪ್ ಚಂದ್ರಶೇಖರ ಹಳೇರೊಳ್ಳಿ (22) ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಪ್ರದೀಪ್ ಅವರನ್ನು ನಾಯಿ ಕಚ್ಚಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದೆ ಚಿಕಿತ್ಸೆ ಪಡೆಯದೆ ಮನೆಯಲ್ಲೇ ಇದ್ದ ಎನ್ನಲಾಗಿದೆ. ಆರಂಭದಲ್ಲಿ ಸಣ್ಣ ಗಾಯವೆಂದುಕೊಂಡಿದ್ದ ಕುಟುಂಬದವರೂ ಈ ವಿಷಯವನ್ನು ಲಘುವಾಗಿ ತೆಗೆದುಕೊಂಡಿದ್ದರು ಎಂದು ತಿಳಿದುಬಂದಿದೆ.
ಆದರೆ ಕೆಲ ದಿನಗಳ ಬಳಿಕ ಯುವಕನಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಜ್ವರ, ಆತಂಕ, ನೀರನ್ನು ಕಂಡು ಭಯಪಡುವಿಕೆ ಸೇರಿದಂತೆ ರೇಬಿಸ್ ಸೋಂಕಿನ ಗಂಭೀರ ಲಕ್ಷಣಗಳು ಕಾಣಿಸಿಕೊಂಡಿವೆ. ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಕೊನೆಯುಸಿರೆಳೆದಿದ್ದಾನೆ.

