ಧರ್ಮಸ್ಥಳದ ವಿವಿಧೆಡೆ ನಡೆದ ಎಸ್ಐಟಿ (SIT) ಕಾರ್ಯಾಚರಣೆ ಮುಗಿದು ಹತ್ತು ತಿಂಗಳು ಕಳೆದರೂ, ಅದರಲ್ಲಿ ಪಾಲ್ಗೊಂಡ ಬಡ ಕಾರ್ಮಿಕರಿಗೆ ಹಾಗೂ ಯಂತ್ರೋಪಕರಣ ಒದಗಿಸಿದವರಿಗೆ ಸೇರಬೇಕಾದ ಬಾಕಿ ಹಣ ಇನ್ನೂ ಪಾವತಿಯಾಗಿಲ್ಲ. 2025ರ ಜುಲೈ ತಿಂಗಳಿನಲ್ಲಿ ನಡೆದ ಈ ಹಗಲು-ರಾತ್ರಿ ಕಾರ್ಯಾಚರಣೆಯಲ್ಲಿ ಬೆವರು ಸುರಿಸಿದ ಕಾರ್ಮಿಕರು ಈಗ ತಮ್ಮ ಕೂಲಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಕಳೆದ ವರ್ಷ ಜುಲೈ 28ರಿಂದ ಆಗಸ್ಟ್ 13ರವರೆಗೆ ಆರೋಪಿ ಚಿನ್ನಯ್ಯನನ್ನು ಸ್ಥಳಕ್ಕೆ ಕರೆತಂದಿದ್ದ ವಿಶೇಷ ತನಿಖಾ ತಂಡವು, ಧರ್ಮಸ್ಥಳದ ಅಕ್ಕಪಕ್ಕದ ಸುಮಾರು 17 ಸ್ಥಳಗಳಲ್ಲಿ ತೀವ್ರ ಉತ್ಖನನ ನಡೆಸಿತ್ತು. ಶವ ಹೂತಿಡಲಾಗಿದೆ ಎಂಬ ಶಂಕೆಯ ಮೇಲೆ ನಡೆದ ಈ ಕಾರ್ಯಾಚರಣೆಯಲ್ಲಿ ಪ್ರತಿದಿನ 10ಕ್ಕೂ ಹೆಚ್ಚು ಕಾರ್ಮಿಕರು ಸತತವಾಗಿ ಕೆಲಸ ಮಾಡಿದ್ದರು. ಇವರಿಗೆ ಬರಬೇಕಾದ ಅಂದಾಜು 80,000 ರೂಪಾಯಿ ಕೂಲಿ ಹಣವು ಹತ್ತು ತಿಂಗಳಿನಿಂದ ನೆನೆಗುದಿಗೆ ಬಿದ್ದಿದೆ.
ಕೇವಲ ಕಾರ್ಮಿಕರ ಕೂಲಿ ಮಾತ್ರವಲ್ಲದೆ, ಮಣ್ಣು ಅಗೆಯಲು ಬಳಸಲಾದ ಜೆಸಿಬಿ ಯಂತ್ರಗಳ ಬಾಡಿಗೆ ಕೂಡ ಪಾವತಿಯಾಗಿಲ್ಲ. ದೊಡ್ಡ ಮಟ್ಟದ ಗುಂಡಿಗಳನ್ನು ತೋಡಲು ಬಳಸಲಾದ ವಿವಿಧ ಗಾತ್ರದ ಜೆಸಿಬಿಗಳ ಬಾಡಿಗೆ ಮೊತ್ತವೇ ಸುಮಾರು 71,500 ರೂಪಾಯಿಗಳಷ್ಟಿದೆ. ಇದರೊಂದಿಗೆ ಕಾರ್ಯಾಚರಣೆ ವೇಳೆ ಒದಗಿಸಲಾದ ಶಾಮಿಯಾನ, ಹಾರೆ-ಪಿಕ್ಕಾಸುಗಳು, ಕುಡಿಯುವ ನೀರು ಹಾಗೂ ವಾಹನ ಬಾಡಿಗೆ ಸೇರಿದಂತೆ ಒಟ್ಟು ಬಾಕಿ ಮೊತ್ತವು ಈಗ 2 ಲಕ್ಷ ರೂಪಾಯಿಗಳ ಗಡಿ ದಾಟಿದೆ.
ಎಸ್ಐಟಿ ಅಧಿಕಾರಿಗಳ ಸೂಚನೆಯ ಮೇರೆಗೆ ಧರ್ಮಸ್ಥಳ ಗ್ರಾಮ ಪಂಚಾಯತ್ ಮೂಲಕ ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆದರೆ ಪಂಚಾಯತ್ ನಿಯಮಗಳ ಪ್ರಕಾರ, ತನಿಖಾ ಸಂಸ್ಥೆಗಳ ಇಂತಹ ಖಾಸಗಿ ಕಾರ್ಯಾಚರಣೆಗಳಿಗೆ ಪಂಚಾಯತ್ ನಿಧಿಯನ್ನು ಬಳಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಗೊಂದಲದ ನಡುವೆ ಕಾರ್ಮಿಕರು ಎಸ್ಐಟಿ ಕಚೇರಿಗೆ ತೆರಳಿದರೆ, ಬಿಲ್ ಪ್ರಕ್ರಿಯೆ ನಡೆಯುತ್ತಿದೆ ಎಂಬ ಹಾರಿಕೆ ಉತ್ತರ ಸಿಗುತ್ತಿದ್ದು, ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಈ ಗಂಭೀರ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಅವರು, ಬಿಲ್ ಪಾವತಿಯ ವಿಳಂಬದ ಬಗ್ಗೆ ತಮಗೆ ನಿಖರ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ತಾವು ಕೇವಲ ತನಿಖಾ ಪ್ರಕ್ರಿಯೆಯ ಉಸ್ತುವಾರಿ ವಹಿಸುವುದಾಗಿ ಹೇಳಿರುವ ಅವರು, ಕಾರ್ಮಿಕರ ಮತ್ತು ಯಂತ್ರೋಪಕರಣಗಳ ಬಾಕಿ ಮೊತ್ತದ ಕುರಿತು ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸದ್ಯ ಬಡ ಕಾರ್ಮಿಕರು ತಮ್ಮ ಕಷ್ಟದ ದುಡಿಮೆಯ ಹಣಕ್ಕಾಗಿ ಕಾದು ಕುಳಿತಿದ್ದಾರೆ.
