ಬೆಳ್ತಂಗಡಿ, ಮೇ 21: ರಾಜ್ಯಾದ್ಯಂತ ಭಾರೀ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿರುವ ಧರ್ಮಸ್ಥಳ ಗ್ರಾಮದ ಬಂಗ್ಲಗುಡ್ಡೆ ಕಾಡಿನ “ಬುರುಡೆ ಪ್ರಕರಣ”ದ ತನಿಖೆ ಇದೀಗ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ಸತ್ಯಾಸತ್ಯತೆ ಪತ್ತೆಹಚ್ಚುವ ನಿಟ್ಟಿನಲ್ಲಿ ಬೆಂಗಳೂರಿನಿಂದ ಆಗಮಿಸಿರುವ ಮೂರು ಮಂದಿ ಎಫ್ಎಸ್ಎಲ್ (Forensic Science Laboratory) ತಜ್ಞ ಅಧಿಕಾರಿಗಳ ತಂಡವು ಗುರುವಾರ ಎಸ್ಐಟಿ ಅಧಿಕಾರಿಗಳೊಂದಿಗೆ ಬಂಗ್ಲಗುಡ್ಡೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಮಹಜರು ನಡೆಸಿದೆ. ಪ್ರಕರಣದ ಹಿಂದೆ ಅಡಗಿರುವ ರಹಸ್ಯವನ್ನು ಬಹಿರಂಗಗೊಳಿಸಲು ಇದೀಗ ವೈಜ್ಞಾನಿಕ ಹಾಗೂ ಫೋರೆನ್ಸಿಕ್ ಆಧಾರದ ಮೇಲಿನ ತನಿಖೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಬಂಗ್ಲಗುಡ್ಡೆ ಕಾಡಿನಲ್ಲಿ ಈ ಹಿಂದೆ ಮಾನವನ ಬುರುಡೆ ಪತ್ತೆಯಾಗಿದ್ದ ನಿಖರ ಸ್ಥಳಕ್ಕೆ ಎಫ್ಎಸ್ಎಲ್ ಹಾಗೂ ಎಸ್ಐಟಿ ಅಧಿಕಾರಿಗಳ ತಂಡ ತೆರಳಿ ಸ್ಥಳ ಪರಿಶೀಲನೆ ನಡೆಸಿತು. ಈ ವೇಳೆ ಪ್ರಕರಣದಲ್ಲಿ ಪ್ರಮುಖ ಕೊಂಡಿಯಾಗಿ ಗುರುತಿಸಲ್ಪಟ್ಟಿರುವ ಪ್ರದೀಪ್ ಕುಲಾಲ್ ಎಂಬಾತನನ್ನು ಕೂಡ ಅಧಿಕಾರಿಗಳು ಸ್ಥಳಕ್ಕೆ ಕರೆದೊಯ್ದು ವಿವರ ಸಂಗ್ರಹಿಸಿದರು. ಕಾಡಿನ ಮಧ್ಯೆ ರಾತ್ರಿ ವೇಳೆ ಬುರುಡೆ ಹೊರತೆಗೆಯಲಾಗುತ್ತಿರುವ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಪ್ರದೀಪ್ ಕುಲಾಲ್ ಕಾಣಿಸಿಕೊಂಡಿರುವುದು ತನಿಖೆಗೆ ಮಹತ್ವದ ಸುಳಿವಾಗಿ ಪರಿಣಮಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ಪ್ರದೀಪ್ ಕುಲಾಲ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿಯ ಆಧಾರದ ಮೇಲೆ ತನಿಖೆ ಹೊಸ ತಿರುವು ಪಡೆದಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 183ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ಪ್ರದೀಪ್ ಕುಲಾಲ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹೇಳಿಕೆಯ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಸ್ಥಳಕ್ಕೆ ಎಫ್ಎಸ್ಎಲ್ ತಂಡವನ್ನು ಕರೆಸಿ ವೈಜ್ಞಾನಿಕ ಸಾಕ್ಷ್ಯ ಸಂಗ್ರಹ ಕಾರ್ಯ ಆರಂಭಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿರುವ ಬುರುಡೆ ಮಾನವನದ್ದೇನಾ, ಅದು ಎಷ್ಟು ವರ್ಷಗಳ ಹಳೆಯದು, ಪ್ರಕರಣದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿರುವ ಸಾಧ್ಯತೆ ಇದೆಯೇ ಎಂಬ ಹಲವು ಪ್ರಶ್ನೆಗಳ ಉತ್ತರಕ್ಕಾಗಿ ಇದೀಗ ಫೋರೆನ್ಸಿಕ್ ತಜ್ಞರು ಸವಿಸ್ತಾರ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿನ ಮಣ್ಣು, ಎಲುಬಿನ ಅವಶೇಷಗಳು ಹಾಗೂ ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬೆಳವಣಿಗೆಯಿಂದ ಧರ್ಮಸ್ಥಳ ಸೇರಿದಂತೆ ರಾಜ್ಯದಾದ್ಯಂತ ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿದ್ದು, ಬುರುಡೆ ರಹಸ್ಯದ ಹಿಂದಿರುವ ಆಘಾತಕಾರಿ ಸತ್ಯಗಳು ಶೀಘ್ರದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.
ವರದಿ: www.suddilive.com
