ಬೆಳಗಾವಿ: ಕೊಲೆ, ಸುಲಿಗೆ ಹಾಗೂ ದರೋಡೆ ಕೃತ್ಯಗಳಿಂದಲೇ ಸದಾ ಸುದ್ದಿಯಲ್ಲಿರುವ ಕುಖ್ಯಾತ ಭೀಮಾತೀರದಲ್ಲಿ ಮತ್ತೊಂದು ಭೀಕರ ಹತ್ಯಾಕಾಂಡ ನಡೆದಿದೆ. ಕೇವಲ ಜಮೀನು ವಿವಾದಕ್ಕಾಗಿ ಒಂದೇ ಕುಟುಂಬದ ಆರು ಜನರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಧಾತುಷ್ಟ ಘಟನೆ ಶುಕ್ರವಾರ (ಮೇ 29) ಮಧ್ಯಾಹ್ನ ಸಂಭವಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿರೇಖೆಯಾಗಿ ಹರಿಯುವ ಭೀಮಾನದಿ ಪಾತ್ರದಲ್ಲಿರುವ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಈ ಘೋರ ಕೃತ್ಯ ನಡೆದಿದ್ದು, ಇಡೀ ಭೀಮಾತೀರದಾದ್ಯಂತ ತೀವ್ರ ಆತಂಕ ಹಾಗೂ ಮೌನ ಆವರಿಸುವಂತೆ ಮಾಡಿದೆ.
ಘಟನೆಯಲ್ಲಿ ಹತ್ಯೆಗೀಡಾದ ದುರ್ದೈವಿಗಳನ್ನು ಚಡಚಣ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಂದು ನಿರಾಳೆ (58), ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (60), ರಾಹುಲ್ ನಿರಾಳೆ (28), ಸಮರ್ಥ ನಿರಾಳೆ (27) ಹಾಗೂ ಅವರ ಜೊತೆಗಿದ್ದ ಶಬ್ಬೀರ ನದಾಫ್ (45) ಎಂದು ಗುರುತಿಸಲಾಗಿದೆ. ಮೃತರ ಪೈಕಿ ಐವರು ಒಂದೇ ಕುಟುಂಬದವರಾಗಿದ್ದು, ಮತ್ತೊಬ್ಬರು ಇವರ ಆಪ್ತರಾಗಿದ್ದಾರೆ. ಇವರೆಲ್ಲರೂ ಮೂಲತಃ ಚಡಚಣ ನಿವಾಸಿಗಳಾಗಿದ್ದು, ಇತ್ತೀಚೆಗಷ್ಟೇ ಗೋವಿಂದಪುರ ವ್ಯಾಪ್ತಿಯಲ್ಲಿ ಖರೀದಿಸಿದ್ದ ಜಮೀನಿನ ವಿವಾದವೇ ಈ ಸಾಮೂಹಿಕ ನರಮೇಧಕ್ಕೆ ಪ್ರಮುಖ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಮೂಲಗಳ ಪ್ರಕಾರ, ನಿರಾಳೆ ಕುಟುಂಬವು ಚಡಚಣ ತಾಲೂಕಿನ ನಿವರಗಿ ಗ್ರಾಮದ ತೇಲಿ ಎಂಬುವರಿಂದ ಗೋವಿಂದಪುರದಲ್ಲಿದ್ದ 25 ಎಕರೆ ಜಮೀನನ್ನು ಇತ್ತೀಚೆಗಷ್ಟೇ ಖರೀದಿಸಿತ್ತು. ಈ ಜಮೀನು ಕಳೆದ 15-16 ವರ್ಷಗಳಿಂದ ಯಾವುದೇ ಸಾಗುವಳಿಯಿಲ್ಲದೆ ಪಾಳು ಬಿದ್ದಿದ್ದು, ಇದರ ಸುತ್ತ ಹಲವು ವಿವಾದಗಳು ಸೃಷ್ಟಿಯಾಗಿದ್ದವು. ಶುಕ್ರವಾರ ಮಧ್ಯಾಹ್ನ ನಿರಾಳೆ ಕುಟುಂಬದ ಸದಸ್ಯರು ತಮ್ಮ ಹೊಸ ಜಮೀನನ್ನು ವೀಕ್ಷಿಸಲು ಮತ್ತು ಕೆಲಸದ ನಿಮಿತ್ತ ಅಲ್ಲಿಗೆ ತೆರಳಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ಸಶಸ್ತ್ರ ತಂಡವೊಂದು ಏಕಾಏಕಿ ಇವರ ಮೇಲೆ ಮುಗಿಬಿದ್ದಿದೆ.
ದಾಳಿಯ ಸಂದರ್ಭದಲ್ಲಿ ಆರೋಪಿಗಳು ಮೊದಲು ನಿರಾಳೆ ಕುಟುಂಬದವರ ಕಣ್ಣಿಗೆ ಕಟುವಾದ ಖಾರದ ಪುಡಿಯನ್ನು ಎರಚಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಅವರು ದಿಕ್ಕಾಪಾಲಾಗಿ ಚದುರುವ ಮುನ್ನವೇ, ಕಬ್ಬು ಕತ್ತರಿಸಲು ಬಳಸುವ ಹರಿತವಾದ ಆಯುಧ ಹಾಗೂ ಮಚ್ಚುಗಳಿಂದ ಎಲ್ಲರನ್ನೂ ಭೀಕರವಾಗಿ ಕೊಚ್ಚಿ ಕೊಂದಿದ್ದಾರೆ. ಸ್ಥಳದಲ್ಲೇ ಆರು ಜನರು ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದು, ಕೃತ್ಯ ಎಸಗಿದ ಬಳಿಕ ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ. ಗೋವಿಂದಪುರ ಗ್ರಾಮದಲ್ಲಿ ವಿವಾದದ ಹಿನ್ನೆಲೆ ಹೊಂದಿರುವ ಮತ್ತೊಂದು ಪ್ರಭಾವಿ ಕುಟುಂಬವೇ ಈ ಕೃತ್ಯದ ಹಿಂದೆ ಇರುವ ಬಲವಾದ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಲಕ್ಷ್ಮಣ ನಿಂಬರಗಿ ಅವರು, ಪ್ರಕರಣದ ಕುರಿತು ಅಧಿಕೃತ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. ದಾಳಿಯ ವೇಳೆ ಗುಂಡಿನ ಚಕಮಕಿ ನಡೆದಿದೆಯೇ ಎಂಬ ಅನುಮಾನಗಳಿದ್ದರೂ, ಮೇಲ್ನೋಟಕ್ಕೆ ಕೇವಲ ಹರಿತವಾದ ಆಯುಧಗಳನ್ನು ಬಳಸಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಗುಂಡು ಹಾರಿಸಲಾಗಿದೆಯೇ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಗೋವಿಂದಪುರದಲ್ಲಿ ಬಿಗುವಿನ ವಾತಾವರಣವಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

