ಮಂಗಳೂರು, ಮೇ 30: ಕರಾವಳಿ ಕರ್ನಾಟಕ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ನಡುವೆ ಬಹುಕಾಲದ ನಿರೀಕ್ಷೆಯಾಗಿದ್ದ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಕೊನೆಗೂ ವೇದಿಕೆ ಸಿದ್ಧವಾಗುತ್ತಿದೆ. ಜೂನ್ ತಿಂಗಳಿನಲ್ಲಿಯೇ ರೈಲು ಸೇವೆ ಆರಂಭವಾಗುವ ಸಾಧ್ಯತೆಗಳು ಗಟ್ಟಿಯಾಗಿದ್ದು, ಅದರ ಪೂರ್ವಭಾವಿಯಾಗಿ ಜೂನ್ 1ರಿಂದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ ಅತ್ಯಂತ ಸವಾಲಿನ ಘಾಟ್ ವಿಭಾಗದಲ್ಲಿ ಉನ್ನತ ಮಟ್ಟದ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಆರಂಭವಾಗಲಿದೆ.
ಹಾಸನ-ಮಂಗಳೂರು ರೈಲು ಮಾರ್ಗದ ಈ ಘಾಟ್ ವಿಭಾಗವು ದೇಶದ ಅತ್ಯಂತ ಕಠಿಣ ರೈಲ್ವೆ ಮಾರ್ಗಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇತ್ತೀಚೆಗೆ ಈ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇದೀಗ ಅಂತಿಮ ಹಂತದ ತಾಂತ್ರಿಕ ಪರೀಕ್ಷೆಗಳಿಗೆ ರೈಲ್ವೆ ಇಲಾಖೆ ಮುಂದಾಗಿದೆ. ರೈಲ್ವೆ ಸಚಿವಾಲಯದ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆಯಾದ ಆರ್ಡಿಎಸ್ಒ (RDSO) ತಜ್ಞರ ತಂಡ ಈ ಪರೀಕ್ಷಾ ಸಂಚಾರವನ್ನು ಮೇಲ್ವಿಚಾರಣೆ ಮಾಡಲಿದೆ.
ಜೂನ್ 1ರಿಂದ ಆರಂಭವಾಗಲಿರುವ ಟ್ರಯಲ್ ರನ್ ವೇಳೆ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ನಡುವಿನ 55 ಕಿಲೋಮೀಟರ್ ಉದ್ದದ ಘಾಟ್ ವಿಭಾಗದಲ್ಲಿ ರೈಲಿನ ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ವಿದ್ಯುತ್ ಮೂಲಸೌಕರ್ಯದ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. ಈ ಮಾರ್ಗದಲ್ಲಿ ಕಡಿದಾದ ತಿರುವುಗಳು, ಆಳವಾದ ಕಣಿವೆಗಳು, ಉದ್ದವಾದ ಸುರಂಗಗಳು ಮತ್ತು ಅನೇಕ ಸೇತುವೆಗಳು ಇರುವುದರಿಂದ ರೈಲು ಸಂಚಾರದ ದೃಷ್ಟಿಯಿಂದ ಇದು ಅತ್ಯಂತ ಸಂಕೀರ್ಣ ವಿಭಾಗವಾಗಿದೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲನ್ನು ಜೂನ್ ತಿಂಗಳಿನಲ್ಲಿಯೇ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಸಚಿವರ ಘೋಷಣೆಯ ಬೆನ್ನಲ್ಲೇ ಇದೀಗ ಟ್ರಯಲ್ ರನ್ಗೆ ದಿನಾಂಕ ನಿಗದಿಯಾಗಿರುವುದು ಕರಾವಳಿ ಭಾಗದ ಜನರಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ) ಮುದಿತ್ ಮಿತ್ತಲ್ ಅವರ ಮಾಹಿತಿ ಪ್ರಕಾರ, ಸುಮಾರು ಒಂದು ವಾರಗಳ ಕಾಲ ಈ ಪರೀಕ್ಷಾ ಸಂಚಾರ ನಡೆಯಲಿದೆ. ಪರೀಕ್ಷೆಗಾಗಿ ಅಗತ್ಯವಿರುವ ಎಲ್ಲಾ ತಾಂತ್ರಿಕ ಹಾಗೂ ಸುರಕ್ಷತಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಕೆಲ ದಿನಗಳ ಹಿಂದೆ ಎಲೆಕ್ಟ್ರಿಕ್ ಇಂಜಿನ್ ಬಳಸಿ ಖಾಲಿ ಪ್ಯಾಸೆಂಜರ್ ರೇಕ್ ಮೂಲಕ ನಡೆಸಲಾದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದು, ಮುಂದಿನ ಹಂತವಾಗಿ ವಂದೇ ಭಾರತ್ ರೈಲಿನ ಉನ್ನತ ಮಟ್ಟದ ಪರೀಕ್ಷೆಗೆ ಚಾಲನೆ ನೀಡಲಾಗುತ್ತಿದೆ.
ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗವು ಭಾರತೀಯ ರೈಲ್ವೆಯ ಅತ್ಯಂತ ಸವಾಲಿನ ಮಾರ್ಗಗಳಲ್ಲಿ ಒಂದಾಗಿದೆ. ಸುಮಾರು 55 ಕಿಲೋಮೀಟರ್ ವ್ಯಾಪ್ತಿಯ ಈ ಮಾರ್ಗದಲ್ಲಿ 57 ಸುರಂಗಗಳು, 258 ಸೇತುವೆಗಳು ಹಾಗೂ 108 ಕಡಿದಾದ ತಿರುವುಗಳಿವೆ. ಮಳೆಗಾಲದಲ್ಲಿ ಭೂಕುಸಿತದ ಅಪಾಯವೂ ಹೆಚ್ಚಿರುವುದರಿಂದ ಇಲ್ಲಿ ರೈಲು ಸಂಚಾರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ. ಈ ಎಲ್ಲ ಸವಾಲುಗಳ ನಡುವೆಯೂ ರೈಲುಗಳು ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಅನುಕೂಲವಾಗುವಂತೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ.
ಮೈಸೂರು-ಹಾಸನ-ಮಂಗಳೂರು ಸೇರಿದಂತೆ ಸುಮಾರು 400 ಕಿಲೋಮೀಟರ್ ರೈಲು ಮಾರ್ಗದ ವಿದ್ಯುದೀಕರಣ ಯೋಜನೆಗೆ 2021ರ ಆಗಸ್ಟ್ನಲ್ಲಿ ರೈಟ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆರಂಭದಲ್ಲಿ 461.23 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದ್ದರೂ, ನಂತರ ವಿವಿಧ ತಾಂತ್ರಿಕ ಅಗತ್ಯತೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಿಂದ ಯೋಜನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ.
ರೈಲ್ವೆ ಸಚಿವಾಲಯವು 2026ರ ಮಾರ್ಚ್ ತಿಂಗಳಲ್ಲಿ ಯೋಜನೆಯ ಪರಿಷ್ಕೃತ ವೆಚ್ಚವನ್ನು 729.28 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ. ಇದರಲ್ಲಿ ಕೇವಲ ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ವಿಭಾಗದ ವಿದ್ಯುದೀಕರಣ ಕಾಮಗಾರಿಗಾಗಿಯೇ 2023ರ ಡಿಸೆಂಬರ್ನಿಂದ 2025ರ ಡಿಸೆಂಬರ್ ಅವಧಿಯಲ್ಲಿ 93.55 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 1ರಿಂದ ಆರಂಭವಾಗುವ ಈ ಮಹತ್ವದ ಟ್ರಯಲ್ ರನ್ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಆರ್ಡಿಎಸ್ಒ ತನ್ನ ಅಂತಿಮ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಿದೆ. ವರದಿ ಅನುಮೋದನೆಗೊಂಡ ತಕ್ಷಣ ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ನ ಅಧಿಕೃತ ಉದ್ಘಾಟನಾ ದಿನಾಂಕ, ವೇಳಾಪಟ್ಟಿ ಹಾಗೂ ಪ್ರಯಾಣದ ವಿವರಗಳನ್ನು ಪ್ರಕಟಿಸಲಾಗುವುದು. ಕರಾವಳಿ ಕರ್ನಾಟಕದ ಜನರು ಬಹುಕಾಲದಿಂದ ಕಾಯುತ್ತಿರುವ ಈ ವೇಗದ ರೈಲು ಸೇವೆ ಆರಂಭವಾದರೆ ಮಂಗಳೂರು ಮತ್ತು ಬೆಂಗಳೂರು ನಡುವಿನ ಪ್ರಯಾಣದ ಅವಧಿ ಗಮನಾರ್ಹವಾಗಿ ಕಡಿಮೆಯಾಗಲಿದ್ದು, ಪ್ರವಾಸೋದ್ಯಮ, ವ್ಯಾಪಾರ ಹಾಗೂ ಶಿಕ್ಷಣ ಕ್ಷೇತ್ರಗಳಿಗೂ ಹೊಸ ಉತ್ತೇಜನ ಸಿಗುವ ನಿರೀಕ್ಷೆಯಿದೆ.

